ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಕರ್ತವ್ಯ ಮೊದಲಿರಲಿ, ಬಳಿಕ ಹಕ್ಕು!

ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ, ನಾವು ರಾಷ್ಟ್ರದ ಪರವಾಗಿ ನಮ್ಮ ಕರ್ತವ್ಯಗಳನ್ನು ಎಷ್ಟರಮಟ್ಟಿಗೆ ನಿರ್ವಹಿಸುತ್ತಿದ್ದೇವೆ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳೋಣ
ಅಕ್ಷರ ಗಾತ್ರ

ಮೂರು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನಗಳ, ಸಂವಿಧಾನ ರಚನಾ ಸಭೆಯ 299 ಜನಪ್ರತಿ ನಿಧಿಗಳ ಕಠಿಣ ಪರಿಶ್ರಮದ ಫಲವಾಗಿ ರಚಿತವಾದ ಭಾರತ ಸಂವಿಧಾನವು 1950ರಲ್ಲಿ ಜನವರಿ 26ನೇ ತಾರೀಖು ಜಾರಿಗೆ ಬಂದಿತು. ಭಾರತವು ಸಾರ್ವಭೌಮ, ಸಮಾಜವಾದಿ, ಮತಧರ್ಮನಿರಪೇಕ್ಷ, ಜನಸತ್ತಾತ್ಮಕ ಗಣರಾಜ್ಯವಾಗಿ ಜನ್ಮತಾಳಿದ್ದು ಅದೇ ದಿನ. ನಾವು ಪ್ರತಿವರ್ಷ ಗಣರಾಜ್ಯೋತ್ಸವವನ್ನು ಆಚರಿಸುವುದು ಅದರ ನೆನಪಿಗಾಗಿಯೇ ಎಂದು ನಮಗೆಲ್ಲಾ ಗೊತ್ತಿದೆ. ಈ ಆಚರಣೆಯು ಸಾರ್ಥಕವಾಗಬೇಕು ಎಂದರೆ, ನಾವು ಈ ದಿನದಂದು ಸಂವಿಧಾನದ ಯಾವುದಾದರೂ ಒಂದು ಅಂಶದ ಕುರಿತು ಪುನರ್‌ ಅವಲೋಕನ ಮಾಡಬಹುದು.

ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು ಮತ್ತು ರಾಜ್ಯನೀತಿಯ ನಿರ್ದೇಶಕ ತತ್ವಗಳು- ಇವು ಸಂವಿಧಾನದ ಮೂರು ಆಧಾರ ಸ್ತಂಭಗಳು ಎಂದು ಹೇಳಲಾಗುತ್ತದೆ. ‘ಭಾರತದ ಜನತೆಯಾದ ನಾವು’ ಜನಸತ್ತಾತ್ಮಕ ಪ್ರಕ್ರಿಯೆಯ ಮೂಲಕ ರಚಿಸಿಕೊಂಡು ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡ ಸಂವಿಧಾನದ ವಸ್ತುವಿನ ದೃಷ್ಟಿಯಿಂದ ಮೊದಲ ಮಹತ್ವದ, ಭಾಗ ಮೂರರ ವಿಧಿ 12ರಿಂದ 35, ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಕೊಡಮಾಡಿರುವ ಮೂಲಭೂತ ಹಕ್ಕುಗಳ ಬಗ್ಗೆ ಹೇಳುತ್ತವೆ. ಅವುಗಳೆಂದರೆ, ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು ಹಾಗೂ ಸಂವಿಧಾನಾತ್ಮಕ ಪರಿಹಾರಗಳ ಹಕ್ಕು. ಇವುಗಳನ್ನು ಧರ್ಮ, ಜಾತಿ, ಲಿಂಗ, ಜನ್ಮಸ್ಥಳ ಹೀಗೆ ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬ ನಾಗರಿಕರಿಗೆ ನೀಡಲಾಗಿದೆ.

ಸಂವಿಧಾನದ ಭಾಗ 4, ರಾಜ್ಯನೀತಿಯ ನಿರ್ದೇಶಕ ತತ್ವಗಳ ಕುರಿತಾಗಿದೆ. ಮೂರನೇ ಭಾಗದಲ್ಲಿ ನೀಡಲಾಗಿರುವ ಹಕ್ಕುಗಳನ್ನು ಪೂರೈಸುವಲ್ಲಿ ಸರ್ಕಾರವು ಬದ್ಧವಾಗಿರುತ್ತದೆ. ಹಾಗೆ ಮಾಡದೇ ಇದ್ದಾಗ ಅದು ತನ್ನ ಹೊಣೆಗಾರಿಕೆಯಲ್ಲಿ ಸೋತ ಹಾಗಾಗುತ್ತದೆ. ನ್ಯಾಯಾಲಯಗಳು ಅಂಥ ಹೊಣೆಗಾರಿಕೆಗಳನ್ನು ಸರ್ಕಾರದ ಮೇಲೆ ಹೇರಬಹುದು. ಆದರೆ, ಭಾಗ 4ರಲ್ಲಿ ಇರುವ ನಿರ್ದೇಶಕ ತತ್ವಗಳನ್ನು ನ್ಯಾಯಾಲಯದ ಮೂಲಕ ಜಾರಿಗೊಳಿಸಲು ಬರುವುದಿಲ್ಲ. ಆದಾಗ್ಯೂ, ಈ ಭಾಗದಲ್ಲಿ ಹೇಳಲಾಗಿರುವ ತತ್ವಗಳು ದೇಶದ, ರಾಜ್ಯಗಳ ಆಡಳಿತ ನಿರ್ವಹಣೆಯಲ್ಲಿ ಮೂಲಭೂತವಾಗಿರುತ್ತವೆ ಮತ್ತು ಕಾನೂನುಗಳನ್ನು ಮಾಡುವಲ್ಲಿ ಈ ತತ್ವಗಳನ್ನು ಅನ್ವಯಿಸುವುದು ಸರ್ಕಾರದ ಕರ್ತವ್ಯವಾಗಿರಲಿ ಎಂದು ಸಂವಿಧಾನವು ಆಶಿಸುತ್ತದೆ.

1976ರ ಸಂವಿಧಾನದ 42ನೇ ತಿದ್ದುಪಡಿಯ ಭಾಗವಾಗಿ ಸೇರಿಸಲಾದ ಭಾಗ 4ಎಯ ವಿಧಿ 51ಎಯಲ್ಲಿ ಪ್ರತಿಯೊಬ್ಬ ನಾಗರಿಕರ ‘ಮೂಲಭೂತ ಕರ್ತವ್ಯ’ಗಳ ಕುರಿತು ಹೇಳಲಾಗಿದೆ. ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳ ಭಾಗಗಳು ಒಂದು ರೀತಿಯಲ್ಲಿ ಪ್ರಭುತ್ವ ಮತ್ತು ನಾಗರಿಕರ ನಡುವಿನ ಸಂಬಂಧವನ್ನು ಮತ್ತು ಪರಸ್ಪರ ಬದ್ಧತೆಯನ್ನು ನಿರೂಪಿಸುತ್ತವೆ.

ಭಾರತದ ನಾಗರಿಕರಾಗಿ ನಾವೆಲ್ಲರೂ ಪಾಲಿಸುತ್ತೇವೆ ಎಂದು ಈ ಭಾಗದಲ್ಲಿ ಅಂಗೀಕರಿಸಿರುವ ಕರ್ತವ್ಯಗಳಲ್ಲಿ ಪ್ರಮುಖವಾದವು ಎಂದರೆ: ಎ. ಸಂವಿಧಾನಕ್ಕೆ ಬದ್ಧವಾಗಿರುವುದು ಹಾಗೂ ಅದರ ಆದರ್ಶಗಳನ್ನು ಮತ್ತು ಸಂಸ್ಥೆಗಳನ್ನು, ರಾಷ್ಟ್ರಧ್ವಜವನ್ನು ಹಾಗೂ ರಾಷ್ಟ್ರಗೀತೆಯನ್ನು ಗೌರವಿಸುವುದು. ಬಿ. ನಮ್ಮ ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿ ದಾಯಕವಾಗಿದ್ದ ಉದಾತ್ತ ಆದರ್ಶಗಳನ್ನು ಗೌರವಿಸುವುದು ಮತ್ತು ಅನುಸರಿಸುವುದು. ಸಿ. ಭಾರತದ ಸಾರ್ವಭೌಮತ್ವವನ್ನು, ಏಕತೆ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದು ಹಾಗೂ ಸಂರಕ್ಷಿಸುವುದು. ಡಿ. ದೇಶವನ್ನು ರಕ್ಷಿಸುವುದು ಮತ್ತು ಕರೆ ಬಂದಾಗ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು. ಇ. ಧಾರ್ಮಿಕ, ಭಾಷೆ ಮತ್ತು ಪ್ರಾದೇಶಿಕ ಅಥವಾ ಜಾತಿ ಪಂಗಡಗಳ ಭೇದಭಾವಗಳನ್ನು ಮೀರಿ ಭಾರತದ ಎಲ್ಲಾ ಜನರಲ್ಲಿ ಸಾಮರಸ್ಯವನ್ನು ಮತ್ತು ಸಮಾನ ಭ್ರಾತೃತ್ವದ ಭಾವನೆಯನ್ನು ಬೆಳೆಸುವುದು ಮತ್ತು ಸ್ತ್ರೀಯರ ಗೌರವಕ್ಕೆ ಕುಂದುಂಟುಮಾಡುವ ಆಚರಣೆ ಗಳನ್ನು ಬಿಟ್ಟುಬಿಡುವುದು. ಎಫ್. ನಮ್ಮ ಸಮ್ಮಿಶ್ರ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಗೌರವಿಸುವುದು ಹಾಗೂ ಕಾಪಾಡುವುದು. ಜಿ. ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಹಾಗೂ ಅಭಿವೃದ್ಧಿಗೊಳಿಸುವುದು, ಪ್ರಾಣಿಗಳಿಗೆ ಅನುಕಂಪ ತೋರಿಸುವುದು. ಎಚ್. ವೈಜ್ಞಾನಿಕ ಮನೋವೃತ್ತಿ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣೆಯ ಮನೋಭಾವವನ್ನು ಬೆಳೆಸುವುದು. ಐ. ಸಾರ್ವಜನಿಕ ಸ್ವತ್ತನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು. ಜೆ. ರಾಷ್ಟ್ರವು ನಿರಂತರವಾಗಿ ಸಾಧನೆಯ ಮತ್ತು ಸಿದ್ಧಿಯ ಉನ್ನತ ಮಟ್ಟಗಳನ್ನು ತಲುಪಲು ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಯ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಉನ್ನತಿಗಾಗಿ ಶ್ರಮಿಸುವುದು. ಕೆ. ತಂದೆ- ತಾಯಿ ಅಥವಾ ಪೋಷಕರು, ಆರರಿಂದ ಹದಿನಾಲ್ಕು ವಯಸ್ಸಿನ ತಮ್ಮ ಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶಗಳನ್ನು ಒದಗಿಸುವುದು.

ಕರ್ತವ್ಯಗಳೇ ಹಕ್ಕುಗಳ ನಿಜವಾದ ಮೂಲವಾಗಿವೆ. ಈ ಬಾರಿಯ ಗಣರಾಜ್ಯೋತ್ಸವವನ್ನು ಆಚರಿಸುವಾಗ ನಾವು ಪ್ರತಿಯೊಬ್ಬರೂ ಎಷ್ಟರಮಟ್ಟಿಗೆ ಈ ಕರ್ತವ್ಯ ಗಳನ್ನು ನಿರ್ವಹಿಸುತ್ತಿದ್ದೇವೆ ಎಂಬುದರ ಕುರಿತು ಸ್ವಾವಲೋಕನ ಮಾಡಿಕೊಳ್ಳೋಣ. ಏಕೆಂದರೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ ಅವರು ಹೇಳುವ ಹಾಗೆ, ‘ಸಾಂವಿಧಾನಿಕ ನೈತಿಕತೆಯು ನೈಜವಾದ ಭಾವನೆಯಲ್ಲ, ಅದನ್ನು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಳ್ಳಬೇಕಾಗುತ್ತದೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT