ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ– ಮಕ್ಕಳ ಪಾಲನೆ: ಸಾಂಸ್ಕೃತಿಕ ಲೋಕದ ಹೊಣೆ!

ಮಕ್ಕಳ ಮನೋವಿಕಾಸಕ್ಕೆ ಸಹಾಯಕವಾಗುವಂತಹ ಸಾಹಿತ್ಯ ಮತ್ತು ಸಿನಿಮಾಗಳು ಕನ್ನಡ ಭಾಷೆಯಲ್ಲಿ ಸಮೃದ್ಧವಾಗಿ ರಚನೆಯಾಗ
Last Updated 3 ಅಕ್ಟೋಬರ್ 2022, 19:56 IST
ಅಕ್ಷರ ಗಾತ್ರ

ಮಕ್ಕಳ ಮೊಬೈಲ್ ಗೀಳು ಕೊರೊನಾ ನಂತರದ ಕಾಲದ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೊರೊನಾ ಸಂದರ್ಭದ ಅನಿವಾರ್ಯ ಈಗ ಸಂಕಷ್ಟ ವಾಗಿ ರೂಪಾಂತರಗೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಬೇಕಾದ ಮಹತ್ವದ ಜವಾಬ್ದಾರಿ ಪಾಲಕರು ಮತ್ತು ಶಿಕ್ಷಕರದು ಮಾತ್ರವಲ್ಲದೆ ಸಾಂಸ್ಕೃತಿಕ ಲೋಕ ಕೂಡ ಈ ಹೊಣೆ ಗಾರಿಕೆಯನ್ನು ನಿಭಾಯಿಸಬೇಕಾಗಿದೆ. ಅತ್ಯುತ್ತಮ ಪುಸ್ತಕಗಳ ಓದು ಹಾಗೂ ಸದಭಿರುಚಿಯ ಸಿನಿಮಾಗಳ ವೀಕ್ಷಣೆಗೆ ಮಕ್ಕಳನ್ನು ಒಳಗಾಗಿಸುವುದು ಈ ಸಮಸ್ಯೆಯ ಪರಿಹಾರಕ್ಕಿರುವ ಒಂದು ಸೂಕ್ತ ಮಾರ್ಗ.

‘ಯೌವನದ ದಿನಗಳಲ್ಲಿ ಮಾಡಿದ ತಪ್ಪನ್ನು ಒಪ್ಪಿಕೊಂಡು ಪ್ರಾಯಶ್ಚಿತ್ತ ಹೊಂದಲು ಬಾಲ್ಯದಲ್ಲಿ ಓದಿದ ಉತ್ತಮ ಪುಸ್ತಕಗಳು, ನೋಡಿದ ನಾಟಕಗಳ ಪ್ರಭಾವ ನನಗೆ ನೆರವಾಯಿತು’ ಎಂದು ಗಾಂಧೀಜಿ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ. ಆತಂಕದ ಸಂಗತಿ ಎಂದರೆ, ಮಕ್ಕಳ ಮಾನಸಿಕ ವಿಕಾಸಕ್ಕೆ ನೆರವಾಗಬಲ್ಲ ಪುಸ್ತಕಗಳು ಮತ್ತು ಸಿನಿಮಾಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.

ಮಕ್ಕಳ ಮನೋವಿಕಾಸದ ನಿರ್ಮಾಣದಲ್ಲಿ ಸಾಹಿತ್ಯ ಮತ್ತು ಸಿನಿಮಾದ ಪಾತ್ರ ಅತ್ಯಂತ ಮಹತ್ವದ್ದು. ಶಾಲೆಯು ನಾಲ್ಕು ಗೋಡೆಗಳ ನಡುವೆ ಮಗುವಿನ ವ್ಯಕ್ತಿತ್ವವನ್ನು ರೂಪಿಸುವ ಒಂದು ವ್ಯವಸ್ಥೆಯಾದರೆ, ಸಿನಿಮಾ ಮತ್ತು ಸಾಹಿತ್ಯವು ಆ ಗೋಡೆಗಳ ಹೊರಗೆ ಮಗುವಿನ ವ್ಯಕ್ತಿತ್ವವನ್ನು ರೂಪಿಸುತ್ತವೆ. ಜೊತೆಗೆ ಅತ್ಯುತ್ತಮ ಶಿಕ್ಷಕರಂತೆ ಮಕ್ಕಳ ಸರ್ವಾಂಗೀಣ ಬೆಳವಣಿಗೆ
ಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಮಕ್ಕಳನ್ನು ಸಾಹಿತ್ಯದ ಓದುಗರನ್ನಾಗಿಸುವುದು ಅತ್ಯಂತ ಅವಶ್ಯಕವಾಗಿದೆ. ಸಾಹಿತ್ಯದ ಮೂಲಕವೇ ಮಗು ಪ್ರೀತಿ ಮತ್ತು ಅಂತಃಕರಣ ತುಂಬಿರುವ ಭಾಷೆಯನ್ನು ಕಲಿಯಬೇಕಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ ಜೋಸೆಫ್ ಬ್ರಾಡ್‍ಸ್ಕಿ ‘ಸಾಹಿತ್ಯದಲ್ಲಿ ಭಾಷೆ ಬಳಕೆಯಾಗುವುದಿಲ್ಲ, ಸೃಷ್ಟಿಯಾಗುತ್ತದೆ’ ಎನ್ನುತ್ತಾರೆ.

ಒಂದು ಕಾಲದಲ್ಲಿ ಕನ್ನಡ ಭಾಷೆಯಲ್ಲಿ ಸಮೃದ್ಧವಾಗಿ ಮಕ್ಕಳ ಪುಸ್ತಕಗಳು ಪ್ರಕಟಗೊಂಡಿವೆ. ಎಂ.ಎಸ್.ಪುಟ್ಟಣ್ಣನವರ ‘ನೀತಿ ಚಿಂತಾಮಣಿ’, ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಮತ್ತು ‘ಮೋಡಣ್ಣನ ತಮ್ಮ’ ಮಕ್ಕಳ ಮೆಚ್ಚಿನ ಕೃತಿಗಳಾಗಿವೆ. ಪಂಜೆ ಮಂಗೇಶರಾಯರು, ಶಿವರಾಮ ಕಾರಂತ, ಜಿ.ಪಿ.ರಾಜರತ್ನಂ, ನಾ.ಕಸ್ತೂರಿ, ಚಿ.ಸದಾಶಿವಯ್ಯ, ಸಿಸು ಸಂಗಮೇಶ, ಜಯವಂತ ಕಾಡದೇವರ, ಕಂಚ್ಯಾಣಿ ಶರಣಪ್ಪ ಅವರು ಕನ್ನಡದಲ್ಲಿ ಮಕ್ಕಳ ಸಾಹಿತ್ಯವನ್ನು ಸಮೃದ್ಧಗೊಳಿಸಿದವರಲ್ಲಿ ಪ್ರಮುಖರು. ಎ.ಆರ್.
ಕೃಷ್ಣಶಾಸ್ತ್ರಿಯವರ ‘ನಿರ್ಮಲ ಭಾರತೀ’ ಕೃತಿಯು ಮಕ್ಕಳ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ಎಂದು ಪರಿಗಣಿತ ವಾಗಿದೆ. ಅನುಪಮಾ ನಿರಂಜನ ಅವರ ‘ದಿನಕ್ಕೊಂದು ಕಥೆ’ ಮಕ್ಕಳಿಗಾಗಿ ಬರೆದ 365 ಕಥೆಗಳ ಸಂಪುಟ. ಶಿವರಾಮ ಕಾರಂತರು ‘ಬಾಲ ಪ್ರಪಂಚ’ದ ಮೂಲಕ ಮಕ್ಕಳಿಗಾಗಿ ವಿಜ್ಞಾನಲೋಕದ ವಿಸ್ಮಯಗಳನ್ನು
ಮನೆ ಮನೆಗೂ ಮುಟ್ಟಿಸಿದರು.

ಪರಂಪರೆಯ ಸಮೃದ್ಧ ಹಿನ್ನೆಲೆ ಇರುವ ಮಕ್ಕಳ ಸಾಹಿತ್ಯ ಈಗ ನಿಂತ ನೀರಾಗಿದೆ. ಜನಪ್ರಿಯ ಮಾದರಿಯನ್ನು ಮೈಗೂಡಿಸಿಕೊಂಡಿರುವ ಕನ್ನಡ ಸಾಹಿತ್ಯವಲಯ ಮಕ್ಕಳ ಆಸಕ್ತಿ ಮತ್ತು ಅಭಿರುಚಿಯ ಕಡೆಗೆ ಗಮನ ನೀಡುತ್ತಿಲ್ಲ. ಪತ್ರಿಕೆಗಳಲ್ಲಿ ಅರ್ಧ ಪುಟಕ್ಕಷ್ಟೇ ಮಕ್ಕಳ ಸಾಹಿತ್ಯ ಸೀಮಿತವಾಗುತ್ತಿದೆ. ಸಾಹಿತ್ಯ ಸಮ್ಮೇಳನಗಳ ಕಾರ್ಯಕ್ರಮಗಳಲ್ಲಿ ಮಕ್ಕಳ ಸಾಹಿತ್ಯಕ್ಕೆ ವೇದಿಕೆ ದೊರೆಯುತ್ತಿಲ್ಲ. ಈ ಮೊದಲು ಪ್ರಕಟವಾದ ಮಕ್ಕಳ ಪುಸ್ತಕಗಳನ್ನು ಪುನರ್ ಮುದ್ರಿಸುವ ಕೆಲಸಕ್ಕೆ ಸಾಹಿತ್ಯ ಪರಿಷತ್ತು ಚಾಲನೆ ನೀಡಬೇಕಿದೆ.

ಇನ್ನು ಮಕ್ಕಳ ಸಿನಿಮಾ ವಿಷಯದಲ್ಲಿ ಆಶಾದಾಯಕ ಬೆಳವಣಿಗೆ ಕಾಣಿಸುತ್ತಿಲ್ಲ. ‘ಪುಟಾಣಿ ಏಜೆಂಟ್ 1 2 3’, ‘ಸಿಂಹದ ಮರಿಸೈನ್ಯ’, ‘ಮಕ್ಕಳಸೈನ್ಯ’, ‘ಬೆಟ್ಟದ ಹೂವು’, ‘ನಾಗರಹೊಳೆ’, ‘ಚಿನ್ನಾರಿಮುತ್ತ’ದಂತಹ ಅತ್ಯುತ್ತಮ ಮಕ್ಕಳ ಸಿನಿಮಾಗಳು ನಿರ್ಮಾಣಗೊಂಡ ಕನ್ನಡ ಭಾಷೆಯಲ್ಲಿ ಈಗ ಮಕ್ಕಳ ಸಿನಿಮಾಗಳ ಕ್ಷಾಮ ದಟ್ಟವಾಗಿ ಆವರಿಸಿದೆ. ಮಕ್ಕಳ ಸಿನಿಮಾದಲ್ಲಿನ ‘ಸ್ವಾಮಿದೇವನೆ ಲೋಕಪಾಲನೆ’ ಎನ್ನುವ ಹಾಡು ಒಂದು ಕಾಲದಲ್ಲಿ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿತ್ತು. ಡಾ. ರಾಜ್‌ಕುಮಾರ್ ಅವರಂತಹ ಜನಪ್ರಿಯ ಕಲಾವಿದ ಮಕ್ಕಳ ಸಿನಿಮಾದ ಪ್ರಾಮುಖ್ಯವನ್ನು
ಅರಿತು ‘ಭಕ್ತ ಪ್ರಹ್ಲಾದ’ ಮತ್ತು ‘ಎರಡು ನಕ್ಷತ್ರಗಳು’ ಎನ್ನುವ ಮಕ್ಕಳ ಸಿನಿಮಾಗಳಲ್ಲಿ ನಟಿಸಿದರು.

ಇತ್ತೀಚಿನ ಮಕ್ಕಳ ಸಿನಿಮಾಗಳು ಮಕ್ಕಳ ಅಭಿರುಚಿ ಮತ್ತು ಆಸಕ್ತಿಗೆ ಪೂರಕವಾಗಿ ನಿರ್ಮಾಣ ವಾಗುತ್ತಿಲ್ಲ. ಬಾಲಕಲಾವಿದರು ಅಭಿನಯಿಸುತ್ತಿರುವ ಪಾತ್ರಗಳು ವಾಸ್ತವಿಕತೆಗೆ ದೂರವಾಗಿರುತ್ತವೆ. ಬಾಲಕ, ಬಾಲಕಿಯ ನಡುವೆ ಪ್ರೇಮಾಂಕುರ, ಚಿಕ್ಕವಯಸ್ಸಿನಲ್ಲಿ ಅಪರಾಧ ಪ್ರಪಂಚ ಪ್ರವೇಶಿಸುವುದು, ಅಪಾಯಕಾರಿ ಆಯುಧಗಳನ್ನು ಬಳಸುವಂತಹ ದೃಶ್ಯಗಳಲ್ಲಿ ಅಭಿನಯಿಸಲು ಬಾಲಕಲಾವಿದರನ್ನು ಬಳಸಿಕೊಳ್ಳ ಲಾಗುತ್ತಿದೆ. ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಸಿನಿಮಾಗಳ ಸಂಖ್ಯೆ ಕ್ಷೀಣಿಸುತ್ತಿದೆ.

ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳು ಮನರಂಜನೆಯ ಹೆಸರಿನಲ್ಲಿ ಮಕ್ಕಳನ್ನು ದಾರಿ ತಪ್ಪಿಸುತ್ತಿವೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಮಕ್ಕಳ ಮನೋವಿಕಾಸಕ್ಕೆ ಸಹಾಯಕವಾಗುವಂತಹ ಮಕ್ಕಳ ಸಾಹಿತ್ಯ ಮತ್ತು ಸಿನಿಮಾಗಳು ಕನ್ನಡ ಭಾಷೆಯಲ್ಲಿ ಸಮೃದ್ಧವಾಗಿ ರಚನೆಯಾಗಬೇಕು. ಅಂತಹ ಸಿನಿಮಾ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಬೆಳೆಸುವ ಹೊಣೆಗಾರಿಕೆ ಮತ್ತು ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT