ನವದೆಹಲಿ, ಫೆ. 6: ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಯಾವುದೇ ನೀತಿ ಅಥವಾ ಮಾರ್ಗದರ್ಶಿ ಸೂತ್ರವನ್ನು ರಾಜ್ಯಗಳ ಮೇಲೆ ಹೇರುವುದಿಲ್ಲ ಎಂದು ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ಇಂದು ಸ್ಪಷ್ಟಪಡಿಸಿದರು.
ನೀರಿನ ಬಳಕೆ ಮತ್ತು ನಿರ್ವಹಣೆಯಂಥ ಪ್ರಮುಖ ವಿಷಯದಲ್ಲಿ ಸಹಮತಕ್ಕೆ ಬರಲು ರಾಜ್ಯಗಳಿಗೆ ಮುಕ್ತ ಅವಕಾಶ ಇದೆ ಎಂದು ಇಲ್ಲಿ ನಡೆದ ಮೂರನೇ ರಾಷ್ಟ್ರೀಯ ಜಲಸಂಪನ್ಮೂಲ ಮಂಡಳಿ ಸಭೆಯಲ್ಲಿ ಪ್ರಧಾನಿಯವರು ತಿಳಿಸಿದರು.
ಪ್ರತಿಯೊಂದು ರಾಜ್ಯಗಳು ತಮ್ಮದೇ ಆದ ಸಮಸ್ಯೆಗಳನ್ನು ಹೊಂದಿರುವುದರಿಂದ ಕೇಂದ್ರ ಸರ್ಕಾರವು ತನ್ನ ಅಭಿಪ್ರಾಯವನ್ನು ಹೇರುವ ಬದಲು ಈ ಮಂಡಲಿಯ ವೇದಿಕೆಯಲ್ಲಿಯೇ ಎಲ್ಲ ಮುಖ್ಯಮಂತ್ರಿಗಳು ಒಮ್ಮತಕ್ಕೆ ಬಂದು ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಅವರು ಸಲಹೆ ಮಾಡಿದರು.