ನವದೆಹಲಿ, ಏ. 18 (ಪಿಟಿಐ)– ವಸತಿ ಹಗರಣದಲ್ಲಿ ತಮ್ಮ ಪಾತ್ರದ ಬಗ್ಗೆ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯದ ಹಿನ್ನೆಲೆಯಲ್ಲಿ ಅಧಿಕಾರ ತ್ಯಾಗ ಮಾಡಲು ಹಿಮಾಚಲ ಪ್ರದೇಶದ ರಾಜ್ಯಪಾಲೆ ಶೀಲಾ ಕೌಲ್ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ.
ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮಾ ಅವರು ಈ ಸಂಬಂಧ ಕ್ರಮ ತೆಗೆದುಕೊಳ್ಳಲು ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರಿಗೆ ಸೂಚಿಸಿದ್ದಾರೆ. ಹೀಗಾಗಿ, ಯಾವುದೇ ಕ್ಷಣದಲ್ಲಿ ಶೀಲಾ ಕೌಲ್ ಅವರು ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಬಹುದು ಎಂಬ ಗುಲ್ಲು ಶಿಮ್ಲಾ ಮತ್ತು ದೆಹಲಿಯಲ್ಲಿ ಇಂದು ಹರಡಿತ್ತು.
ಚುನಾವಣಾ ಫಲಿತಾಂಶ ಶೀಘ್ರ ಪ್ರಕಟಣೆಗೆ ಆಯೋಗದ ಕ್ರಮ
ನವದೆಹಲಿ, ಏ. 18 (ಪಿಟಿಐ)– ಗೆಲ್ಲುವ ಹಾಗೂ ಸೋಲುವ ಅಭ್ಯರ್ಥಿಗಳ ನಡುವಿನ ಅಂತರ ಒಟ್ಟು ಮತದಾನದ ಶೇಕಡ ಐದಕ್ಕಿಂತ ಹೆಚ್ಚಿದ್ದರೆ ವಿಳಂಬ ಮಾಡದೇ ಫಲಿತಾಂಶ ಪ್ರಕಟಿಸಲು ಚುನಾವಣಾ ಅಧಿಕಾರಿಗೇ ಅಧಿಕಾರ ನೀಡುವ ಮಹತ್ವದ ನಿರ್ಧಾರವನ್ನು ಚುನಾವಣಾ ಆಯೋಗ ಇಂದು ತೆಗೆದುಕೊಂಡಿತು.
ಈ ಅಂತರ ಶೇಕಡ ಐದಕ್ಕಿಂತ ಕಡಿಮೆ ಇದ್ದರೆ ಫಲಿತಾಂಶ ಪ್ರಕಟಕ್ಕೆ ಮುನ್ನ ಚುನಾವಣಾ ಅಧಿಕಾರಿಗಳು ಆಯೋಗದ ಅನುಮತಿ ಪಡೆದುಕೊಳ್ಳಬೇಕು ಎಂದು ಆಯೋಗದ ವಕ್ತಾರರು ಸುದ್ದಿಗಾರರಿಗೆ ತಿಳಿಸಿದರು.