ಜಯಾ ನಿರ್ಧಾರದಿಂದ ವಾಜಪೇಯಿ ಸರ್ಕಾರ ಬಿಕ್ಕಟ್ಟಿನಲ್ಲಿ: ಎಐಎಡಿಎಂಕೆ ಸಚಿವರು ಸಂಪುಟದಿಂದ ಹೊರಕ್ಕೆ
ಚೆನ್ನೈ, ಏ. 5 (ಪಿಟಿಐ)– ತಮ್ಮ ಪಕ್ಷದ ಇಬ್ಬರು ಸಚಿವರನ್ನು ಕೇಂದ್ರದ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಿಂದ ಹಿಂದಕ್ಕೆ ಕರೆಸಿಕೊಳ್ಳಲು ತೀರ್ಮಾನಿಸುವ ಮೂಲಕ ಎಐಎಡಿಎಂಕೆ ಪಕ್ಷ ಸರ್ಕಾರದ ಜತೆಗಿನ ಸಂಬಂಧ ತೊರೆದು, ಕೇಂದ್ರದಲ್ಲಿ ಪರ್ಯಾಯ ಸರ್ಕಾರ ರಚನೆಗೆ ಪ್ರಯತ್ನ ನಡೆಸುವ ತೀರ್ಮಾನವನ್ನು ಪ್ರಕಟಿಸಿದೆ.
ಎಐಎಡಿಎಂಕೆಯ ಮೂರು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸಚಿವ ಸಂಪುಟ ತಿರಸ್ಕರಿಸಿದ್ದರ ಹಿನ್ನೆಲೆಯಲ್ಲಿ ಸಂಪುಟದಿಂದ ತನ್ನ ಇಬ್ಬರು ಸಚಿವರನ್ನು ವಾಪಸು ಕರೆಸಿಕೊಳ್ಳಲು ಪಕ್ಷದ ನಾಯಕಿ ಜಯಲಲಿತಾ ಅವರು ನಿರ್ಧರಿಸಿದರು.
ಪ್ರತ್ಯೇಕ ರಾಜ್ಯ ಬೇಡಿಕೆ ಮಾತೃದ್ರೋಹ: ಪಟೇಲ್
ಚಿಕ್ಕಮಗಳೂರು, ಏ. 5– ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಡಿಕೆಯನ್ನು ತಳ್ಳಿ ಹಾಕಿದ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ‘ರಾಜ್ಯ ಒಡೆಯೋದೂ ಇಲ್ಲ. ಒಡೆಯಲು ಬಿಡೋದು ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಇಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುವುದು ಮಾತೃದ್ರೋಹ ಎಂದರು.