ನವದೆಹಲಿ, ಜೂನ್ 2: ಭಾರತೀಯ ಸೇನೆಯು ಕಾರ್ಗಿಲ್ ವಲಯದ ಬಟಾಲಿಕ್ ಉಪ ವಿಭಾಗದಲ್ಲಿ ಪಾಕಿಸ್ತಾನ ಬೆಂಬಲಿತ ಎಂಟು ಮಂದಿ ಅತಿಕ್ರಮಣಕಾರರನ್ನು ಹತ್ಯೆ ಮಾಡುವುದರೊಂದಿಗೆ ಮಹತ್ವದ ಬೆಳವಣಿಗೆ ಸಾಧಿಸಿದೆ. ಜತೆಗೆ ಇತರೆ ಐವರು ಉಗ್ರಗಾಮಿಗಳನ್ನು ತೀವ್ರವಾಗಿ ಗಾಯಗೊಳಿಸಿದೆ.
ಈ ನಡುವೆ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್ಗಳು
ನಡೆಸಿದ ಎರಡು ಹಂತಗಳ ತೀವ್ರ ಬಾಂಬ್ ದಾಳಿಯಲ್ಲಿ ಕಾರ್ಗಿಲ್ ವಲಯದ ಲ್ಲಿದ್ದ ಪಾಕಿಸ್ತಾನದ ಉಗ್ರಗಾಮಿಗಳ ಅಡಗುತಾಣಗಳು ಧ್ವಂಸವಾಗಿವೆ.
‘ಬೇಹುಗಾರಿಕೆ ವೈಫಲ್ಯ’: ಜಾರ್ಜ್ ಕೈಬಿಡಲು ಪ್ರತಿಪಕ್ಷಗಳ ಆಗ್ರಹ
ನವದೆಹಲಿ, ಜೂನ್– 2: ತಮ್ಮ ವಿವಾದಾತ್ಮಕ ಹೇಳಿಕೆ ಗಳಿಂದ ಕಾರ್ಗಿಲ್ ಪರಿಸ್ಥಿತಿಯ ಬಗ್ಗೆ ದಿಕ್ಕು ತಪ್ಪಿಸಿ ದೇಶದ ಹಿತವನ್ನು ಕಡೆಗಣಿಸಿರುವ ಸಚಿವ ಜಾರ್ಜ್ ಫರ್ನಾಂಡಿಸ್ ಅವರಿಂದ ರಕ್ಷಣಾ ಖಾತೆಯನ್ನು ವಾಪಸ್ ಪಡೆಯಬೇಕು ಎಂದು ಪ್ರಧಾನಿ ವಾಜಪೇಯಿ ಅವರನ್ನು ಸಿಪಿಐ ಆಗ್ರಹಪಡಿಸಿದೆ.
ಬೇಹುಗಾರಿಕೆ ವಿಫಲತೆಗೆ ಫರ್ನಾಂಡಿಸ್ ಅವರೇ ಹೊಣೆ ಹೊರಬೇಕು ಎಂದು ಸಿಪಿಐನ ಗುರುದಾಸ್ ದಾಸ್ಗುಪ್ತಾ ಹಾಗೂ ಜೆ. ಚಿತ್ತರಂಜನ್ ಅವರು ಒತ್ತಾಯಿಸಿದ್ದಾರೆ.