ನವದೆಹಲಿ, ಮಾರ್ಚ್ 21– ಈ ಬಾರಿ ಲೋಕಸಭೆಯ ಚುನಾವಣೆಗೂ ಚುನಾವಣಾ ಆಯೋಗ ಕಡ್ಡಾಯ ಗುರುತಿನ ಚೀಟಿಯನ್ನು ಕೈಬಿಟ್ಟಿದೆ.
ಈ ವಿಷಯದಲ್ಲಿ ಆಯೋಗದ ಕಡ್ಡಾಯ ನೀತಿಯನ್ನು ಕಳೆದ ವರ್ಷ ಸುಪ್ರೀಂ ಕೋರ್ಟ್ ತಳ್ಳಿಹಾಕಿದ್ದು ಈಗಿನ ನಿರ್ಧಾರಕ್ಕೆ ನಿಜವಾದ ಕಾರಣವಾಗಿದೆಯಾದರೂ, ಹಲವು ರಾಜ್ಯಗಳು ಫೋಟೊ ಇರುವ ಮತದಾನದ ಗುರುತಿನ ಚೀಟಿಯ ಕಾರ್ಯವನ್ನು ಇನ್ನೂ ಪೂರೈಸಿಲ್ಲವಾದ್ದರಿಂದ ಈ ವರ್ಷವೂ ವಿನಾಯಿತಿ ನೀಡಿದೆ.
ಮತದಾರರಿಗೆ ಫೋಟೊ ಇರುವ ಗುರುತಿನ ಚೀಟಿಯನ್ನು ವಿತರಿಸಬೇಕೆಂದು ಚುನಾವಣೆ ಆಯೋಗ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ. ಅದರಂತೆ ಈ ವಿಷಯದಲ್ಲಿ ಪ್ರತೀ ವಾರವೂ ಪ್ರಗತಿಯ ಮೇಲುಸ್ತುವಾರಿ ನೋಡುತ್ತಿದ್ದರೂ ಹಲವು ರಾಜ್ಯಗಳಲ್ಲಿನ ಈ ಕಾರ್ಯ ಇನ್ನೂ ಮುಕ್ತಾಯಗೊಂಡಿಲ್ಲ ಎಂದು ಆಯೋಗ ಹೇಳಿದೆ.
ಪಿಎಸ್ಎಲ್ವಿ– ಡಿ3 ಯಶಸ್ವಿ ಉಡಾವಣೆ
ಶ್ರೀಹರಿಕೋಟ, ಮಾರ್ಚ್ 21– ಸಂಪೂರ್ಣ ಸ್ವದೇಶಿ ನಿರ್ಮಿತ ಉಪಗ್ರಹವಾಹಕ ‘ಪಿಎಸ್ಎಲ್ವಿ– ಡಿ3’ ಇಂದು ಬೆಳಿಗ್ಗೆ ‘ಐಆರ್ಎಸ್– ಪಿ3’ ಉಪಗ್ರಹವನ್ನು ನಿರಾಳವಾಗಿ ಸೂರ್ಯ ಸಮಾಂತರ ಕಕ್ಷೆಗೆ ಸೇರಿಸುವುದರೊಂದಿಗೆ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮತ್ತೊಂದು ಮಹತ್ತರ ಉಡ್ಡಯನಕ್ಕೆ ಭಾರತ ಸಜ್ಜಾಯಿತು.