ಬೆಂಗಳೂರು, ಮೇ 23– ರಾಜ್ಯದ ವಿವಿಧ ಸರ್ಕಸ್ ತಂಡಗಳಲ್ಲಿರುವ 25 ಪ್ರಾಣಿಗಳ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ. ಐದು ಪ್ರಕಾರದ ಸರ್ಕಸ್ ಪ್ರಾಣಿಗಳ ಪ್ರದರ್ಶನ ವನ್ನು ನಿಷೇಧಿಸಿ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಈ ಪ್ರಾಣಿಗಳ ಪುನರ್ವಸತಿಗೆ ಸ್ಪಷ್ಟ ಯೋಜನೆ ಇಲ್ಲದಿರುವುದೇ ಇದಕ್ಕೆ ಕಾರಣ.
ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಸಲ್ಲಿಸಿದ ಅರ್ಜಿಯನ್ನು ಎತ್ತಿಹಿಡಿದ ನ್ಯಾಯಾಲಯ, ಕಳೆದ ಡಿಸೆಂಬರ್ನಲ್ಲಿ (1998) ಹುಲಿ, ಸಿಂಹ, ಮಂಗ, ಚಿರತೆ ಮತ್ತು ಕರಡಿಗಳನ್ನು ಸರ್ಕಸ್ನಲ್ಲಿ ಬಳಸುವುದಕ್ಕೆ ನಿಷೇಧ ವಿಧಿಸಿತು.
ನಾಲ್ಕುನೂರರಷ್ಟಿದ್ದ ಈ ವರ್ಗದ ಪ್ರಾಣಿಗಳು ತಂಡಕ್ಕೆ ಆದಾಯ ತರುವುದನ್ನು ನಿಲ್ಲಿಸಿದ್ದು, ರಾಷ್ಟ್ರದಾದ್ಯಂತ ಇರುವ ಸುಮಾರು 64 ಸರ್ಕಸ್ ತಂಡಗಳಿಗೆ ಇವುಗಳ ನಿರ್ವಹಣೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ನಂಜನಗೂಡಿನಲ್ಲಿ ಡಕಾಯಿತಿ ರೂ. 3 ಲಕ್ಷ ಲೂಟಿ
ನಂಜನಗೂಡು, ಮೇ 23– ಪಟ್ಟಣದ ಹೊರ ವಲಯದಲ್ಲಿ ಊಟಿ ರಸ್ತೆಯಲ್ಲಿನ, ನಿರ್ಮಾಣ ಹಂತದಲ್ಲಿರುವ ಶ್ರೀಪತಿ ಬಡಾವಣೆಯ ಮೇಲೆ ದಾಳಿ ನಡೆಸಿದ ನಾಲ್ವರು ಡಕಾಯಿತರ ತಂಡವೊಂದು, ಎರಡು ಮನೆಗಳಿಗೆ ನುಗ್ಗಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದೆ.
ಜಿಲ್ಲೆಯ ಹುಣಸೂರು ಭಾಗದಲ್ಲಿ ಕೆಲ ದಿನಗಳ ಹಿಂದೆ ನಡೆದ ಡಕಾಯಿತಿ ಮಾದರಿಯಲ್ಲೇ ಲೂಟಿ ಮಾಡಲಾಗಿದೆ.