ಚೆನ್ನೈ, ಡಿಸೆಂಬರ್ 6 (ಪಿಟಿಐ): ಅಯೋಧ್ಯೆಯ ಬಾಬ್ರಿ ಮಸೀದಿ ಕೆಡವಿದ ದಿನವಾದ ಇಂದು ತಮಿಳುನಾಡು ಹಾಗೂ ಕೇರಳದ ಮೂರು ರೈಲುಗಳ ಬೋಗಿಗಳಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಿಂದ ಕನಿಷ್ಠ 10 ಮಂದಿ ಮೃತಪಟ್ಟು, 69 ಜನರು ಗಾಯಗೊಂಡಿರುವ ಘಟನೆಗಳು ನಡೆದಿವೆ.
ಮದುರೆಗೆ ಹೊರಟಿದ್ದ ಪಾಂಡಿಯನ್ ಎಕ್ಸ್ಪ್ರೆಸ್ ರೈಲಿನ ಬೋಗಿಗಳಲ್ಲಿ ಬೆಳಿಗ್ಗೆ 5.15ರ ವೇಳೆಗೆ ತಿರುಚಿನಾಪಳ್ಳಿ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿದಾಗ ಐವರು ಸತ್ತು, 15 ಮಂದಿ ಗಾಯಗೊಂಡಿದ್ದಾರೆ.
ಈರೋಡ್ನ ಪೆರುಂತುರೈ ಸಮೀಪದ ತೊಟ್ಟಿಪಾಳ್ಯಂನಲ್ಲಿ ಕೊಯಮತ್ತೂರಿಗೆ ಹೊರಟಿದ್ದ ಚೇರನ್ ಎಕ್ಸ್ಪ್ರೆಸ್ ರೈಲಿನ ಬೋಗಿಯಲ್ಲಿ ಬೆಳಿಗ್ಗೆ 5.10ರ ವೇಳೆಗೆ ಬಾಂಬ್ ಸ್ಫೋಟಿಸಿ ಇಬ್ಬರು ಮೃತಪಟ್ಟು, 9 ಮಂದಿ ಗಾಯಗೊಂಡಿದ್ದಾರೆ. ಕೇರಳದ ತ್ರಿಶ್ಶೂರ್ನಲ್ಲಿ ಚೆನ್ನೈ–ಅಲಪ್ಪುಳ ಎಕ್ಸ್ಪ್ರೆಸ್ ರೈಲಿನ ಬೋಗಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಮೂವರು ಮೃತಪಟ್ಟಿದ್ದಾರೆ.
l→11ರಂದು ಬಂಗಾರಪ್ಪ ಹೊಸ ಪಕ್ಷ ಉದಯ
ಬೆಂಗಳೂರು, ಡಿಸೆಂಬರ್ 6– ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ನೇತೃತ್ವದ ನೂತನ ರಾಜಕೀಯ ಪಕ್ಷವಾದ ‘ಕರ್ನಾಟಕ ವಿಕಾಸ ಪಕ್ಷ’ ಈ ತಿಂಗಳ 11ರಂದು ಇಲ್ಲಿ ವಿಧ್ಯುಕ್ತವಾಗಿ ಆರಂಭವಾಗಲಿದೆ. ಕಾಂಗ್ರೆಸ್ ಪಕ್ಷವನ್ನು ನಿನ್ನೆಯಷ್ಟೇ ತೊರೆದು ದೆಹಲಿಯಿಂದ ಇಂದು ನಗರಕ್ಕೆ ಆಗಮಿಸಿದ ಬಂಗಾರಪ್ಪ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಈ ವಿಚಾರ ತಿಳಿಸಿದರು.