ಬಿಜೆಪಿ ಭಿನ್ನರ ಸಮಾವೇಶ ಅಹಮದಾಬಾದ್, ಸೆ. 24 (ಯುಎನ್ಐ)– ಪಕ್ಷದ ಹೈಕಮಾಂಡ್ ಎಚ್ಚರಿಕೆ ಮಧ್ಯೆಯೂ ಬಿಜೆಪಿಯ ಭಿನ್ನಮತೀಯರು ಇಂದು ಸಂಜೆ ಇಲ್ಲಿಯ ದಿನೇಶ್ ಸಭಾಂಗಣದಲ್ಲಿ ಸಮಾವೇಶ ನಡೆಸಿ, ಪಕ್ಷದಲ್ಲಿ ಹೆಚ್ಚುತ್ತಿರುವ ದಬ್ಬಾಳಿಕೆ, ಭ್ರಷ್ಟಾಚಾರ ಹಾಗೂ ಗೂಂಡಾಗಿರಿಯ ವಿರುದ್ಧ ಹೋರಾಡುವ ಪಣ ತೊಟ್ಟರು.
ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಮೇಯರ್ ಗೋಪಾಲಭಾಯ್ ಸೋಲಂಕಿ ಅವರ ಅಧ್ಯಕ್ಷತೆಯಲ್ಲಿ ಈ ಸಮಾ ವೇಶ ಜರುಗಿತು. ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಮೋದಿ ಅವರನ್ನು ಕೂಡಲೇ ತೆಗೆದು ಹಾಕುವಂತೆ ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು. ಇದಲ್ಲದೆ ಮೋದಿ ಅವರ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ತನಿಖೆ ನಡೆಸುವಂತೆಯೂ ಆಗ್ರಹಪಡಿಸಲಾಯಿತು.
ಶಾಸನಸಭೆ: ಮಹಿಳೆಗೆ ಶೇ 25 ಪ್ರಾತಿನಿಧ್ಯಕ್ಕೆ ಕ್ರಮ ಮೈಸೂರು, ಸೆ. 24– ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ 25ರಷ್ಟು ಮೀಸಲಾತಿ ನೀಡಲು ನಿರ್ಧರಿಸಿರುವ ಕರ್ನಾಟಕ ಸರ್ಕಾರ, ಈ ದಿಕ್ಕಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಡಲಿದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲೂ ಮಹಿಳೆಯರಿಗೆ ಶೇ 25ರಷ್ಟು ಸ್ಥಾನಗಳನ್ನು ಮೀಸಲಿರಿಸುವ ಸಂಬಂಧ ಅವಿರೋಧ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಿಕೊಡಲಿದೆ.