ಐಆರ್ಎಸ್–1ಸಿ: ಕ್ಯಾಮೆರಾ ಚಾಲನೆ ಯಶಸ್ವಿ
ಬೆಂಗಳೂರು, ಡಿ. 30– ಒಂದೇ ಪ್ರದೇಶವನ್ನು ಎರಡು ಆಯಾಮಗಳಿಂದ ಚಿತ್ರಿಸಬಲ್ಲ ಐಆರ್ಎಸ್– 1ಸಿ ದೂರ ಸಂವೇದಿ ಉಪಗ್ರಹದ ‘ಪಂಕ್ರೋಮ್ಯಾಟಿಕ್ ಕ್ಯಾಮೆರಾ’ವನ್ನು ಯಶಸ್ವಿಯಾಗಿ ನಿಗದಿತ ಸ್ಥಿತಿಯಲ್ಲಿ ತೆರೆಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.
ಈ ಕ್ಯಾಮೆರಾ ಸೆರೆ ಹಿಡಿಯುವ ಮಾಹಿತಿಯ ಮೂಲಕ ಭೂ ಮೇಲ್ಮೈಯ ಡಿಜಿಟಲ್ ನಕ್ಷೆಗಳು ಲಭ್ಯ. ಬಹು ಸೂಕ್ಷ್ಮ ಸ್ತರದ ನಗರ ಯೋಜನೆ ಮತ್ತು ಅಧ್ಯಯನ ದಲ್ಲಿ ಇವು ಬಹು ಉಪಯುಕ್ತ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಪ್ರಕಟಣೆ ತಿಳಿಸಿದೆ.
ಕಾವೇರಿ ಸಭೆ ಅಪೂರ್ಣ ಮತ್ತೆ ಪ್ರಧಾನಿ ಚರ್ಚೆ
ನವದೆಹಲಿ, ಡಿ. 30– ಭಾರಿ ಕುತೂಹಲ ಕೆರಳಿಸಿದ್ದ, ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಅಧ್ಯಕ್ಷತೆಯಲ್ಲಿ ಇಂದು ರಾತ್ರಿ ನಡೆದ ಕಾವೇರಿ ವಿವಾದ ಕುರಿತ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರ ನಾಯಕರ ಸಂಧಾನ ಸಭೆ ಯಾವುದೇ ಸ್ಪಷ್ಟ
ನಿರ್ಧಾರವಿಲ್ಲದೆ ನಾಳೆಗೆ ಮುಂದಕ್ಕೆ ಹೋಯಿತು.
ಪ್ರಧಾನಿ ಅವರು ನಾಳೆ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಮುಖ್ಯಮಂತ್ರಿಗಳನ್ನೊಳಗೊಂಡಂತೆ ಆಯಾ ರಾಜ್ಯಗಳ ನಿಯೋಗ ಗಳನ್ನು ಪ್ರತ್ಯೇಕವಾಗಿ ಕರೆದು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.