ನವದೆಹಲಿ, ಡಿ. 7 – ಇನ್ನೂ ಭರವಸೆಯಾಗಿಯೇ ಉಳಿದಿರುವ ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿ ಏರಿಕೆ, ತಡೆಹಿಡಿಯಲಾಗಿರುವ ದೂರವಾಣಿ ಮತ್ತು ಅಡುಗೆ ಅನಿಲ ಸೌಲಭ್ಯ ಇಂದು ಲೋಕಸಭೆಯಲ್ಲಿ ಬಿಸಿ ಚರ್ಚೆಗೆ ಎಡೆಕೊಟ್ಟು, ಈ ಬಗೆಗೆ ನ್ಯಾಯಾಲಯಗಳ ‘ಹಸ್ತಕ್ಷೇಪ’ವು ಇಂದು ತೀವ್ರವಾಗಿ ಟೀಕೆಗೆ ಗುರಿಯಾಯಿತು.
ಸಮಾಜವಾದಿ ಪಕ್ಷದ ಶೈಲೇಂದ್ರ ಕುಮಾರ್, ಸಂಸತ್ ಸದಸ್ಯರ ವಿವೇಚನೆಗೆ ಅವರವರ ಕ್ಷೇತ್ರದ ಅಭಿವೃದ್ಧಿಗೆ ನೀಡುವ ಒಂದು ಕೋಟಿ ಹಣವು ಸಕಾಲಕ್ಕೆ ಬಿಡುಗಡೆ ಆಗುತ್ತಿಲ್ಲ ಎಂದು ಶೂನ್ಯವೇಳೆಯಲ್ಲಿ ಮಾಡಿದ ಪ್ರಸ್ತಾಪ, ದೂರವಾಣಿ ಮತ್ತು ಅಡುಗೆ ಅನಿಲ ಸೌಲಭ್ಯದ ತಡೆಯೂ ಸೇರಿದ್ದರಿಂದ 45 ನಿಮಿಷ ಕಾಲ ಚರ್ಚೆಗೆ ಎಡೆಮಾಡಿತು.
ಸಾಬೂನು ಕಾರ್ಖಾನೆ: ನಾಲ್ವರು ಅಧಿಕಾರಿಗಳ ಅಮಾನತು
ಬೆಂಗಳೂರು, ಡಿ. 7 – ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಯಲ್ಲಿ 1990–92ರ ಅವಧಿಯಲ್ಲಿ ಸಾಬೂನು ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ನಿಯಮ ಬಾಹಿರವಾಗಿ ಖರೀದಿಸಿರುವ ಆರೋಪದ ಮೇಲೆ ನಾಲ್ವರು ಅಧಿಕಾರಿಗಳನ್ನು ಅಮಾನತಿನಲ್ಲಿ ಇಡಲಾಗಿದೆ.