ನವದೆಹಲಿ, ಜೂನ್ 10– ಪಾಕಿಸ್ತಾನದ ಸೈನಿಕರು ಆರು ಮಂದಿ ಭಾರತೀಯ ಯೋಧರ ಕೆಲವು ಅಂಗಾಂಗಗಳನ್ನು ಕತ್ತರಿಸಿದ ದೇಹಗಳನ್ನು ನೀಡಿದ್ದು, ಇದು ಅತ್ಯಂತ ಅಮಾನುಷ ಮತ್ತು ಬರ್ಬರ ಕೃತ್ಯ ಎಂದು ಇಂದು ಭಾರತ ಕಟುವಾಗಿ ಖಂಡಿಸಿದೆ.
ಕಣ್ಮರೆಯಾಗಿದ್ದ ಹದಿನಾಲ್ಕು ಮಂದಿಯಲ್ಲಿ ಈ ಆರು ಮಂದಿ ಯೋಧರು ಪಾಕಿಸ್ತಾನದ ಘೋರ ಕೃತ್ಯಕ್ಕೆ ಒಳಗಾದವರು. ಈ ಅಮಾನುಷ ಕೃತ್ಯವು ಹಿಂದೆಂದೂ ನಡೆದಿಲ್ಲ, ಇದು ಅಂತರರಾಷ್ಟ್ರೀಯ ಸಂಪ್ರದಾಯದ ಉಲ್ಲಂಘನೆಯಾಗಿದೆ ಎಂದು ಭೂಸೇನಾ ಪಡೆಯ ವಕ್ತಾರ ಕರ್ನಲ್ ವಿಕ್ರಂ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಇಂದು ಪಾಕಿಸ್ತಾನದ ನಡೆಯನ್ನು ಖಂಡಿಸಿದರು.
ಈ ನಡುವೆ, ಕಾರ್ಗಿಲ್ ವಲಯದಿಂದ ಅತಿಕ್ರಮಣಕಾರರನ್ನು ಓಡಿಸುವ ತನಕ ಭಾರತೀಯ ಪಡೆಗಳು ವಿರಮಿಸುವುದಿಲ್ಲ ಎಂದು ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಪಟ್ನಾದಲ್ಲಿ ಎಚ್ಚರಿಕೆ ನೀಡಿದ್ದಾರೆ.