25 ವರ್ಷಗಳ ಹಿಂದೆ: ಬುಧವಾರ, ಜನವರಿ 14, 1998

ನದಿಗೆ ಬಸ್ ಬಿದ್ದು 66 ವಿದ್ಯಾರ್ಥಿಗಳ ಸಾವು
ಮುರ್ಶಿದಾಬಾದ್, (ಪ. ಬಂಗಾಳ) ಜ.13 (ಪಿಟಿಐ)– ಇಲ್ಲಿಗೆ ಸಮೀಪದ ಜಲಂಗಿ ಎಂಬಲ್ಲಿ ಪ್ರವಾಸಿ ಬಸ್ಸು ರಸ್ತೆಯಿಂದ ಉರುಳಿ ಪದ್ಮಾ ನದಿಗೆ ಬಿದ್ದುದರಿಂದ ಅದರಲ್ಲಿ ಇದ್ದ ವಿದ್ಯಾರ್ಥಿಗಳಲ್ಲಿ ಕನಿಷ್ಠ 66 ವಿದ್ಯಾರ್ಥಿಗಳು ನೀರುಪಾಲಾಗಿರಬೇಕೆಂದು ಶಂಕಿಸಲಾಗಿದೆ.
ಇಂದು ಬೆಳಗಿನ ಜಾವ ಈ ದುರಂತ ಸಂಭವಿಸಿದೆ. ಭಾರಿ ಪ್ರಮಾಣದಲ್ಲಿ ಮಂಜು ಕವಿದುದೇ ಇದಕ್ಕೆ ಕಾರಣ ಎನ್ನಲಾಗಿದೆ. 53 ವಿದ್ಯಾರ್ಥಿಗಳು ಮುಳುಗಿ ಸತ್ತಿದ್ದು, ನಾಪತ್ತೆಯಾಗಿರುವ 13 ವಿದ್ಯಾರ್ಥಿಗಳೂ ಸತ್ತಿರಬೇಕೆಂದು ಶಂಕಿಸಲಾಗಿದೆ. ಶೋಧ ಮುಂದುವರೆದಿದೆ. 46 ಮೃತದೇಹಗಳನ್ನು ನೀರಿನಿಂದ ಮೇಲೆತ್ತಲಾಗಿದೆ.
ಮುರ್ಶಿದಾಬಾದ್ ಜಿಲ್ಲೆಯಲ್ಲಿರುವ ಕೊನೆಯ ಮೊಘಲ್ ನವಾಬರಿಗೆ ಸೇರಿದ್ದ ಚಾರಿತ್ರಿಕ ಸ್ಥಳ ಲಾಲ್ಬಾಗ್ಗೆ ವಿಹಾರಕ್ಕೆ ತೆರಳಿದ 86 ಪ್ರೌಢಶಾಲಾ ವಿದ್ಯಾರ್ಥಿಗಳಿದ್ದ ಬಸ್ಸು ಕರೀಂಪುರಕ್ಕೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ರೈತರ ಮೇಲೆ ಗುಂಡು: 18 ಸಾವು, 100 ಗಾಯ
ಭೋಪಾಲ್, ಜ.13– ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಿನ್ನೆ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆಯಲ್ಲಿ ಸತ್ತವರ ಸಂಖ್ಯೆ 18ಕ್ಕೆ ಏರಿದೆ. ಈ ಘಟನೆಯಲ್ಲಿ ಇನ್ನೂ 100 ಜನರಿಗೆ ಗಾಯಗಳಾಗಿವೆ.
ಜಿಲ್ಲೆಯ ಮುಲ್ತಾಯ್ ತಾಲ್ಲೂಕಿನಲ್ಲಿ ಅಕಾಲಿಕ ಮಳೆ ಮತ್ತು ಗಾಳಿಯಿಂದ ಹಾಳಾಗಿರುವ ಬೆಳೆಗೆ ಹೆಚ್ಚಿನ ಪರಿಹಾರ ನೀಡುವಂತೆ ರೈತರು ಒತ್ತಾಯಿಸುತ್ತಿದ್ದರು. ಅವರು ತಹಸೀಲ್ದಾರರ ಕಚೇರಿಗೆ ಮುತ್ತಿಗೆ ಹಾಕಿ ಖಜಾನೆಯನ್ನು ದೋಚಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.