ಆಹಾರ ಧಾನ್ಯ ಸಂಗ್ರಹಣೆ ಒಂದೇ ಒಂದು ಆಪಾದನೆ ಸ್ಥಿರಪಟ್ಟರೂ ರಾಜೀನಾಮೆಗೆ ಸಿದ್ಧ: ಅರಸು ಸವಾಲು
ಬೆಂಗಳೂರು, ಮಾ.5– ಆಹಾರ ಧಾನ್ಯ ಅಕ್ರಮ ಸಂಗ್ರಾಹಕರ ವಿರುದ್ಧ ರಾಜ್ಯದಲ್ಲಿ ಈಚೆಗೆ ನಡೆದ ದಾಳಿಯು ‘ರಾಜಕೀಯ ದುರುದ್ದೇಶದ್ದು, ಪಕ್ಷಕ್ಕೆ ಹಣ ಸಂಗ್ರಹಿಸಲು ಹೂಡಿದ್ದು ಎಂಬಿತ್ಯಾದಿ ನೂರು ಆಪಾದನೆಗಳ ಪೈಕಿ ಒಂದನ್ನಾದರೂ, ರುಜುವಾತು ಮಾಡಿಕೊಟ್ಟರೆ, ರಾಜೀನಾಮೆ ನೀಡಿ ಹೊರಗೆ ಹೋಗುವುದಾಗಿ’ ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದವರಿಗೆ ಸವಾಲು ಹಾಕಿದರು.
‘ಏನೇ ತಪ್ಪಗಳು ಆಗಲಿ; ಯಾರದೇ ನಿಷ್ಠುರವಾಗಲಿ ಪಡಿತರ ಕೊಡುತ್ತೇವೆ ಎಂದು ಜನಕ್ಕೆ ನಾವು ನೀಡಿದ ಭರವಸೆಯನ್ನು ಈಡೇರಿಸುತ್ತೇವೆ’ ಎಂದರು.
ರಾಷ್ಟ್ರೀಕೃತ ಬ್ಯಾಂಕ್ಗಳ ದಕ್ಷತೆ, ಲಾಭಾಂಶ ಕುಸಿತ– ಚವಾಣ್ ಒಪ್ಪಿಗೆ
ನವದೆಹಲಿ, ಮಾ.5– ರಾಷ್ಟ್ರಾದ್ಯಂತ ರಾಷ್ಟ್ರೀಕೃತ ಬ್ಯಾಂಕುಗಳ ದಕ್ಷತೆ ಕುಸಿದಿದೆಯೆಂದು ಹಣಕಾಸು ಸಚಿವ ವೈ.ಬಿ. ಚವಾಣ್ ಇಂದು ರಾಜ್ಯಸಭೆಯಲ್ಲಿ ಒಪ್ಪಿಕೊಂಡರು.
ಸಚಿವರು ಎ.ಜಿ. ಕುಲಕರ್ಣಿ ಅವರಿಗೆ ಉತ್ತರ ಕೊಟ್ಟು, ಈ ಬ್ಯಾಂಕುಗಳಲ್ಲಿ ಠೇವಣಿದಾರರಿಗೆ ಒದಗಿಸುತ್ತಿರುವ ಸೇವೆಯ ಲಕ್ಷಣ ಕಳೆದ ಕೆಲವು ವರ್ಷಗಳಲ್ಲಿ ಸ್ವಲ್ಪ ಕ್ಷೀಣಿಸಿದೆ ಎಂದು ಹೇಳಿದರು.
ಆಡಳಿತ ವರ್ಗ ಮತ್ತು ನೌಕರರ ನಡುವೆ ಬಾಂಧವ್ಯ ಉತ್ತಮಗೊಳಿಸಿ ದಕ್ಷತೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆಯೆಂದು ಅವರು ನುಡಿದರು.