ಸಚಿವರ ಹತೋಟಿ ಅಸಾಧ್ಯವಾದರೆ ಅರಸು ರಾಜೀನಾಮೆಗೆ ಒತ್ತಾಯ
ಬೆಂಗಳೂರು, ಡಿ. 1– ಪೌರಾಡಳಿತ ಸಚಿವ ಬಿ. ಬಸವಲಿಂಗಪ್ಪ ಅವರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಆಗದಿದ್ದರೆ ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್.ಡಿ. ದೇವೇಗೌಡ ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳ ಚಳವಳಿಯ ಸಂಬಂಧದಲ್ಲಿ ಮುಖ್ಯಮಂತ್ರಿಯವರು, ರಾಮನಗರದಲ್ಲಿ ವ್ಯಕ್ತಪಡಿಸಿದ ಪ್ರತಿಕ್ರಿಯೆಯ ನಂತರ, ರಾಜ್ಯದಲ್ಲಿ ಬೇಕಾದಷ್ಟು ಪ್ರಮಾಣದಲ್ಲಿ ಚಳವಳಿ ಬೆಳೆದಿದೆ ಎಂದೂ, ಆ ಬಗ್ಗೆ ಏನೂ ಹೇಳದೆ ಅಸಡ್ಡೆ ಮನೋಭಾವ ತೋರಿದರೆ ಇಂದಿನ ಅನಾಹುತಕ್ಕೆ ಮುಖ್ಯಮಂತ್ರಿ ಅರಸು ಅವರೇ ಕಾರಣರಾಗಲಿದ್ದಾರೆ ಎಂದೂ ಅವರು ಹೇಳಿದರು.
ನಗರದಲ್ಲಿ ಉದ್ರಿಕ್ತ ಗುಂಪಿನಿಂದ ಎರಡು ಬಸ್ಸುಗಳಿಗೆ ಬೆಂಕಿ: ಕಲ್ಲು ತೂರಾಟ
ಬೆಂಗಳೂರು, ಡಿ. 1– ವಿದ್ಯಾರ್ಥಿಗಳ ಒಂದು ಗುಂಪಿನವರು ಇಂದು ವಿಜಯ ಕಾಲೇಜಿನ ಬಳಿ ಸಾರಿಗೆ ಬಸ್ಸೊಂದಕ್ಕೆ ಬೆಂಕಿ ಹಚ್ಚಿದ ಹಾಗೂ ನಗರದ ಅನೇಕ ಕಡೆಗಳಲ್ಲಿ ಬಸ್ಸುಗಳಿಗೆ ಕಲ್ಲು ಹೊಡೆದ ಪ್ರಕರಣಗಳು ವರದಿಯಾಗಿವೆ.
ಮತ್ತೊಂದು ಗುಂಪು ಒಂದು ಚಿತ್ರಮಂದಿರಕ್ಕೆ ಕಲ್ಲು ಹೊಡೆದ ಪರಿಣಾಮವಾಗಿ ಮಂದಿರದ ಗಾಜುಗಳು ಪುಡಿಪುಡಿಯಾಗಿವೆ.