ಬಾಂಗ್ಲಾದೇಶದ ಜನತಾ ವಿಪ್ಲವಕ್ಕೆ ಸಂಸತ್ತಿನ ಸಂಪೂರ್ಣ ಸಮರ್ಥನೆ
ನವದೆಹಲಿ, ಮಾರ್ಚ್ 31– ಪೂರ್ವ ಬಂಗಾಲದ ಜನತೆ ಜನತಂತ್ರಾತ್ಮಕ ಜೀವನ ವಿಧಾನಕ್ಕಾಗಿ ಕೈಗೊಂಡಿರುವ ಹೋರಾಟಕ್ಕೆ ಭಾರತದ ಸಂಸತ್ ಗಾಢ ಸಹಾನುಭೂತಿ ಯನ್ನೂ ಪೂರ್ಣ ಸಮರ್ಥನೆಯನ್ನೂ ಇಂದು ಘೋಷಿಸಿತು. ಬಲ ಪ್ರಯೋಗವನ್ನು ಕೂಡಲೇ ನಿಲ್ಲಿಸಬೇಕೆಂದೂ ನಿಶ್ಶಸ್ತ್ರ ಜನತೆಯ ನರಮೇಧ ಕೊನೆ ಗಾಣಬೇಕೆಂದೂ ಕೇಳಿತು.
ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಜಯಘೋಷಗಳ ನಡುವೆ ಸರ್ವಾನುಮತದಿಂದ ಅಂಗೀಕರಿಸಿದ ನಿರ್ಣಯ, ‘ಜನರ ಆಸೆ ಆಕಾಂಕ್ಷೆಗಳನ್ನು ತುಳಿಯುವ ಉದ್ದೇಶದಿಂದ ಪೂರ್ವ ಬಂಗಾಳದ ಇಡೀ ಜನತೆಯ ವಿರುದ್ಧ ಪಶ್ಚಿಮ ಪಾಕಿಸ್ತಾನದಿಂದ ರವಾನಿಸಿರುವ ಸಶಸ್ತ್ರ ಪಡೆಗಳ ಸಾಮೂಹಿಕ ದಾಳಿ’ಯನ್ನು ಗಮನಕ್ಕೆ ತಂದುಕೊಂಡಿದೆ.
‘ನಿಮ್ಮ ಹೋರಾಟ ಮತ್ತು ತ್ಯಾಗಗಳಿಗೆ ಭಾರತದ ಜನತೆಯ ಹೃತ್ಪೂರ್ವಕ ಸಹಾನುಭೂತಿ ಮತ್ತು ಬೆಂಬಲ ದೊರಕುವುದು’ ಎಂದು ನಿರ್ಣಯವು ಪೂರ್ವ ಬಂಗಾಳದ ಏಳೂವರೆ ಕೋಟಿ ಜನರಿಗೆ ಭರವಸೆ ಕೊಟ್ಟಿದೆ.
ನಗರ–ದೆಹಲಿಯ ನಡುವೆ ಹೆಚ್ಚು ನೇರ ಡಬ್ಬಿಗಳ ಓಡಾಟ
ಬೆಂಗಳೂರು, ಮಾರ್ಚ್ 31– ಏಪ್ರಿಲ್ 1ರಿಂದ ಬೆಂಗಳೂರು–ದೆಹಲಿ ನಡುವೆ ನೇರವಾಗಿ ಹೋಗಿ ಬರುವ ಸೌಲಭ್ಯವನ್ನು ದಕ್ಷಿಣ ರೈಲ್ವೆ ಹೆಚ್ಚಿಸಿದೆ.
ಅಂದಿನಿಂದ ಈ ಮಾರ್ಗದಲ್ಲಿ ಒಂದು ಪೂರ್ಣ ಪ್ರಥಮ ದರ್ಜೆ ಡಬ್ಬಿ (22 ಸೀಟು) ಹಾಗೂ ಒಂದು ಪೂರ್ಣ ಮಲಗುವ ಹಾಗೂ ಕೂರುವ ಸೌಕರ್ಯ ಉಳ್ಳ 3ನೇ ತರಗತಿಯ ಡಬ್ಬಿ (40 ಸೀಟು) ನೇರವಾಗಿ ಸಂಚಾರ ಮಾಡುವುದು.