ನವದೆಹಲಿ, ಜೂನ್ 18– ‘ನಾಚಿಕೆಗೇಡು!’ ‘ಫ್ಯಾಸಿಸ್ಟ್ ಮುರ್ದಾಬಾದ್’ ಎಂದು ಹೇಳುತ್ತಾ ವಿರೋಧ ಪಕ್ಷಗಳು ಸಭಾತ್ಯಾಗ ಮಾಡುತ್ತಿದ್ದಂತೆಯೇ ಲೋಕಸಭೆಯು ಇಂದು 1971ರ ಆಂತರಿಕ ಭದ್ರತಾ ಮಸೂದೆಗೆ ಒಪ್ಪಿಗೆ ನೀಡಿತು.
ಆಂತರಿಕ ಭದ್ರತಾ ಮಸೂದೆಯನ್ನು ವಿರೋಧಿಸಿ ಎಲ್ಲ ವಿರೋಧಪಕ್ಷಗಳ ಸದಸ್ಯರೂ ಸಭಾತ್ಯಾಗ ಮಾಡಿದರು.
ಸ್ಪೀಕರ್ ಮಸೂದೆಯನ್ನು ಮತಕ್ಕೆ ಹಾಕಿದಾಗ ಜನಸಂಘದ ಸದಸ್ಯರು ‘ಇಂದಿರಾ ಷಾಹಿ ಮುರ್ದಾಬಾದ್’ ಎಂದು ಕಮ್ಯುನಿಸ್ಟ್ ಸದಸ್ಯರು ‘ಫ್ಯಾಸಿಸ್ಟ್ ಮುರ್ದಾಬಾದ್’ ಎಂದೂ ಕೂಗುತ್ತಾ ಸಭೆಯಿಂದ ಹೊರಬಂದರು.
ಕಾರ್ಮಿಕರು ಅಥವಾ ರೈತ ಚಳವಳಿ ವಿರುದ್ಧ ಈ ಶಾಸನವನ್ನು ಬಳಸಲಾಗುವುದಿಲ್ಲವೆಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಶ್ರೀ ಕೆ.ಸಿ. ಪಂತ್ ಭರವಸೆ ನೀಡಿದಾಗ್ಯೂ, ಈ ವಿಧೇಯಕದ ಬಗ್ಗೆ ಸಂಸ್ಥಾ ಕಾಂಗ್ರೆಸ್ ಸದಸ್ಯರು ಹೊರತು ಉಳಿದೆಲ್ಲ ವಿರೋಧಪಕ್ಷದ ಸದಸ್ಯರು ಅಸಮ್ಮತಿ ವ್ಯಕ್ತಪಡಿಸಿದರು.
ಕಳ್ಳರ ಕೈಗೆ ಸಿಕ್ಕಿದ ವಿಷ್ಣು ವಿದೇಶಕ್ಕೆ
ನವದೆಹಲಿ, ಜೂನ್ 18– ಕಳವು ಮಾಡಿದ ಐದು ಅಡಿ ಎತ್ತರದ ವಿಷ್ಣು ದೇವರ ವಿಗ್ರಹವನ್ನು ಸರಕು ಕೊಂಡುಕೊಳ್ಳುವ ಅಮೆರಿಕನ್ನೊಬ್ಬರಿಗೆ 50 ಲಕ್ಷ ರೂ.ಗಳಿಗೆ ಮಾರಾಟ ಮಾಡಿದುದಕ್ಕೆ ಸಂಬಂಧಿಸದಂತೆ ಇಲ್ಲಿನ ಮೂರು ಮಂದಿ ಪ್ರಾಚೀನ ಕಲಾವಸ್ತುಗಳ ಮಾರಾಟಗಾರರನ್ನು ಬಂಧಿಸಲಾಗಿದೆ.