ಕಾವೇರಿ ವಿವಾದ: ತಮಿಳುನಾಡು ದಾವಾ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೈಸೂರಿನ ‘ತಡೆಅರ್ಜಿ’ ಸಲ್ಲಿಕೆ
ನವದೆಹಲಿ, ಆ. 6– ಮೈಸೂರು ಸರ್ಕಾರಕ್ಕೆ ಪೂರ್ವಭಾವಿಯಾಗಿ ತಿಳಿವಳಿಕೆ ನೀಡದೆ ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದ ತಮಿಳುನಾಡಿನ ದಾವಾ ಬಗೆಗೆ ಮುಂದಿನ ಕ್ರಮ ಕೈಗೊಳ್ಳಬಾರದೆಂದು ಕೋರುವ ‘ತಡೆ ಅರ್ಜಿ’ಯೊಂದನ್ನು ಸುಪ್ರೀಂ ಕೋರ್ಟ್ನಲ್ಲಿ ಇಂದು ಮೈಸೂರು ರಾಜ್ಯ ಸಲ್ಲಿಸಿತು.
ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದದಲ್ಲಿ ತಮಿಳುನಾಡು ಸರ್ಕಾರವು ದಾವಾ ಹೂಡಿದ್ದು, ಹೇಮಾವತಿ ಮತ್ತು ಕಪಿಲಾ ಯೋಜನೆಗಳ ಕಾಮಗಾರಿಯನ್ನು ಮುಂದುವರಿಸಿಕೊಂಡು ಹೋಗದಂತೆ ಮೈಸೂರು ತಾತ್ಕಾಲಿಕ ತಡೆ ನೀಡಬೇಕೆಂದು ಕೋರಿದೆ.
ಮತಚೀಟಿಗಳ ಮೇಲೆ ಅಸಹಜ ಗುರುತು: ತನಿಖೆಗೆ ದೆಹಲಿ ಹೈಕೋರ್ಟ್ನ ನಿರ್ಧಾರ
ನವದೆಹಲಿ, ಆ. 6– ಲೋಕಸಭೆಗೆ ಮಾರ್ಚ್ ತಿಂಗಳಲ್ಲಿ ನಡೆದ ಚುನಾವಣೆಗಳಲ್ಲಿ ಬಳಸಲಾದ ಬಹುಸಂಖ್ಯೆಗಳ ಮತಚೀಟಿಗಳು ಯಾವುದೋ ಯಾಂತ್ರಿಕ ಅಥವಾ ರಾಸಾಯನಿಕ ವಿಧಾನಗಳಿಂದ ಮಾಡಿದ ಗುರುತುಗಳನ್ನು ತೋರಿಸುತ್ತವೆ ಎಂಬ ಆಪಾದನೆಯ ಬಗ್ಗೆ ತನಿಖೆ ನಡೆಸಲು ದೆಹಲಿ ಹೈಕೋರ್ಟ್ ಇಂದು ನಿರ್ಧರಿಸಿತು.