ಅರಸು ಗುಂಪಿನ ವಿರುದ್ಧ ಮೊದಲ ಬಾರಿಗೆ ಭಿನ್ನಮತೀಯರ ಬಹಿರಂಗ ಸೆಣಸು
ಬೆಂಗಳೂರು, ಮೇ 16– ವಿಧಾನಮಂಡಲದ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತೀಯರು ಮೊದಲ ಬಾರಿಗೆ ‘ಬಹಿರಂಗವಾಗಿ ಹೊರಬಂದು’ ಅರಸು ಬೆಂಬಲಿಗರ ಗುಂಪಿನೊಡನೆ ‘ಹೋರಾಡಲಿದ್ದಾರೆ’.
ಈ ‘ಹೋರಾಟದ’ ಅಂಗವಾಗಿ ನಾಳೆ ನಡೆಯಲಿರುವ ಪಕ್ಷದ ಅಧಿಕಾರ ವರ್ಗ ಹಾಗೂ ಕಾರ್ಯಸಮಿತಿ ಚುನಾವಣೆಗಳಲ್ಲಿ ಭಿನ್ನಮತೀಯರು ಮುಖ್ಯಮಂತ್ರಿ ಗುಂಪಿನ ವಿರುದ್ಧ ಸ್ಪರ್ಧಿಸಲಿದ್ದಾರೆ.
ಪಕ್ಷದ ಉಪನಾಯಕ ಸ್ಥಾನಕ್ಕೆ ಮಂತ್ರಿಮಂಡಲದ ಗುಂಪಿನ ಪರವಾಗಿ ಹಿರಿಯ ಸದಸ್ಯ, ಸಚಿವ ಶ್ರೀ ಎಚ್. ಸಿದ್ದವೀರಪ್ಪ ಅವರ ವಿರುದ್ಧ ಭಿನ್ನಮತೀಯರ ಪರವಾಗಿ ಮಾಜಿ ಸಚಿವ ಶ್ರೀ ಬಿ. ಬಸವಲಿಂಗಪ್ಪ ಅವರು ಸ್ಪರ್ಧಿಸಿದ್ದಾರೆ. ಈ ಸ್ಪರ್ಧೆ ಪೈಪೋಟಿಯ ಸೂಚಕವಾಗಿದೆ.