ಸಿಮ್ಲಾ, ಜೂನ್ 30– ಸಹಾಯಕರ ನೆರವಿಲ್ಲದೆ ಭಾರತದ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಪಾಕಿಸ್ತಾನದ ಅಧ್ಯಕ್ಷ ಭುಟ್ಟೊ ಅವರಿಬ್ಬರೇ ಇಂದು ಸಂಜೆ ಇಲ್ಲಿಯ ರಾಜಭವನದಲ್ಲಿ ಸುಮಾರು ನಲವತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಎರಡೂ ರಾಷ್ಟ್ರಗಳ ನಡುವೆ ಶಾಂತಿ ಹಾಗೂ ಮೈತ್ರಿಯುತ ಬಾಂಧವ್ಯ ಸ್ಥಾಪನೆಗೆ ಕರಡು ಒಪ್ಪಂದ ರಚಿಸುವುದರಲ್ಲಿ ಅಧಿಕಾರಿ ಮಟ್ಟದಲ್ಲಿ ಒಪ್ಪಿಗೆಯಾಗದೇ ನನೆಗುದಿಗೆ ಬಿದ್ದ ಅಂಶಗಳನ್ನು ಅವರಿಬ್ಬರೂ ಚರ್ಚಿಸಿದರೆಂದು ಗೊತ್ತಾಗಿದೆ.
ಹಿಂದುಳಿದ ವರ್ಗ ನಿರ್ಧರಿಸುವ ಈಗಿನ ನೀತಿ ಬದಲಾಯಿಸಲು ರಾಜ್ಯ ಸರ್ಕಾರದ ಆಲೋಚನೆ
ಬೆಂಗಳೂರು, ಜೂನ್ 30– ಬಡತನವನ್ನು ಆಧರಿಸಿ, ಹಿಂದುಳಿದ ವರ್ಗದವರನ್ನು ನಿರ್ಧರಿಸುವ ಈಗಿನ ನೀತಿಯನ್ನು ಬದಲಾಯಿಸಿ, ಹಿಂದುಳಿದ ಕೆಲವೊಂದು ಜಾತಿಗಳನ್ನೂ ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸುವ ಬಗ್ಗೆ ರಾಜ್ಯ ಸರ್ಕಾರ ಯೋಚಿಸುತ್ತಿದೆ.
ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ದಲಿತವೆಂದು ಪರಿಗಣಿಸಲಾಗಿರುವ ಕೆಲವು ಜಾತಿಗಳವರ ಹಲವು ವರ್ಷಗಳ ಒತ್ತಾಯವನ್ನು ಅನುಸರಿಸಿ, ಈ ಬದಲಾವಣೆ ಮಾಡಲು ಉದ್ದೇಶಿಸಿರುವ ಸರ್ಕಾರ, ಹಿಂದುಳಿದ ವರ್ಗಗಳ ಹೊಸ ಪಟ್ಟಿಯೊಂದನ್ನು ರಚಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ.
ಪ್ರಶ್ನೋತ್ತರ ಕಾಲದಲ್ಲಿ ಈ ವಿಷಯವನ್ನು ಇಂದು ವಿಧಾನಸಭೆಗೆ ತಿಳಿಸಿದ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ‘ಆದಾಯದ ಮೇಲೆ ಹಿಂದುಳಿದ ವರ್ಗದವರನ್ನು ನಿರ್ಧರಿಸುವ ಈಗಿನ ಕ್ರಮದಿಂದ ನ್ಯಾಯ ದೊರೆಯುತ್ತಿಲ್ಲ ಎಂಬ ಕೆಲವು ಜಾತಿಗಳವರ ಮನವಿಗಳನ್ನು ಸರ್ಕಾರ ಮನಗಂಡಿದೆ’ ಎಂದರು.