ನವದೆಹಲಿ, ಮೇ 2– ಅಖಿಲ ಭಾರತ ರೈಲ್ವೆ ನೌಕರರ ಫೆಡರೇಷನ್ನಿನ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಅವರನ್ನು ಲಖನೌ ರೈಲು ನಿಲ್ದಾಣದಲ್ಲಿ ಇಂದು ಬೆಳಗಿನ ಜಾವದ ವೇಳೆಯಲ್ಲಿ ಬಂಧಿಸಲಾಯಿತು.
ಆಂತರಿಕ ಭದ್ರತಾ ಶಾಸನದ ಮೇರೆಗೆ ಬಂಧಿಸಲಾಗಿರುವ ಫರ್ನಾಂಡಿಸ್ ಅವರನ್ನು ದೆಹಲಿಗೆ ಕರೆತರಲಾಗಿದೆ. ದೆಹಲಿ ಆಡಳಿತವು ನೀಡಿದ ವಾರಂಟ್ ಮೇರೆಗೆ ದೆಹಲಿ ಪೊಲೀಸರು ಅವರನ್ನು ಬಂಧಿಸಿದರು ಎಂದು ಉತ್ತರ ಪ್ರದೇಶ ಸರ್ಕಾರದ ಗೃಹಖಾತೆ ಕಾರ್ಯದರ್ಶಿ ಆರ್.ಕೆ. ಕೌಲ್ ಅವರು ಲಖನೌನಲ್ಲಿ ತಿಳಿಸಿದರು.
ಮೇ ದಿನಾಚರಣೆ ಸಂಬಂಧದಲ್ಲಿ ನಿನ್ನೆ ರಾತ್ರಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಬಳಿಕ ಲಖನೌ ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ತಂಗಿದ್ದ ಫರ್ನಾಂಡಿಸ್ ಅವರನ್ನು ಬಂಧಿಸಲಾಯಿತು ಎಂದು ಎ.ಐ.ಆರ್.ಎಫ್.ನ ಪ್ರಧಾನ ಕಾರ್ಯದರ್ಶಿ ಪ್ರಿಯ ಗುಪ್ತಾ ಹೇಳಿದರು.
ಭದ್ರಾವತಿ ಕಾರ್ಖಾನೆಯಲ್ಲಿ ಯಂತ್ರೋಪಕರಣ ನಾಪತ್ತೆ; ವಿಧಾನಸಭೆಯಲ್ಲಿ ಆರೋಪ
ಬೆಂಗಳೂರು, ಮೇ 2– ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಾಗಿ ಖರೀದಿಸಿದ್ದ 12 ಲಕ್ಷ ರೂ. ಬೆಲೆಯ ಯಂತ್ರದಲ್ಲಿ ಒಂದೆರಡು ಬಿಡಿಭಾಗ ಬಿಟ್ಟರೆ ಯಂತ್ರೋಪಕರಣಗಳೆಲ್ಲ ನಾಪತ್ತೆಯಾಗಿವೆ ಎಂದು ವಿಧಾನ ಸಭೆಯಲ್ಲಿ ಇಂದು ಪಕ್ಷೇತರ ಸದಸ್ಯ ಶ್ರೀ ಎಸ್. ಬಂಗಾರಪ್ಪ ಅವರು ಆಪಾದಿಸಿದರು.
ಭದ್ರಾವತಿ ಕಾರ್ಖಾನೆ ನಷ್ಟ ಅನುಭವಿಸಲು ಕಾರ್ಖಾನೆಯ ಉನ್ನತ ಅಧಿಕಾರಿಗಳು ನಡೆಸಿದ ಅವ್ಯವಹಾರವೇ ಕಾರಣ. ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಪಡಿಸಿದರು.