ರಾಷ್ಟ್ರದಾದ್ಯಂತ ರೈಲ್ವೆ ಮುಷ್ಕರ: ಸಂಚಾರ ಅಸ್ತವ್ಯಸ್ತ
ನವದೆಹಲಿ, ಮೇ 8– ರಾಷ್ಟ್ರದಾದ್ಯಂತ ಇಂದು ಬೆಳಿಗ್ಗೆ ಆರು ಗಂಟೆಗೆ ರೈಲ್ವೆ ಮುಷ್ಕರ ಪ್ರಾರಂಭವಾದಂತೆ ರೈಲು ಸಂಚಾರ ವ್ಯಾಪಕವಾಗಿ ಅಸ್ತವ್ಯಸ್ತಗೊಂಡಿತು.
ಸ್ವಾತಂತ್ರ್ಯ ಬಂದ ನಂತರ ಇದು ಮೂರನೇ ರೈಲ್ವೆ ಮುಷ್ಕರ. ರಾಷ್ಟ್ರದ ವಿವಿಧ ಭಾಗಗಳಿಂದ ಬಂದಿರುವ ವರದಿಗಳ ಪ್ರಕಾರ ಮುಷ್ಕರದ ಕರೆಗೆ ಸಿಕ್ಕಿರುವ ಪ್ರತಿಕ್ರಿಯೆ ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆಯಾಗಿದೆ. ಮುಖ್ಯ ಮಾರ್ಗಗಳಲ್ಲಿ ಸಂಚಾರ ವ್ಯವಸ್ಥೆಗೆ ತೀವ್ರ ಧಕ್ಕೆ ತಟ್ಟಿತು.
100 ಮಂದಿ ನೌಕರರ ವಜಾ
ಮದರಾಸು, ಮೇ 8– ರೈಲ್ವೆ ಮುಷ್ಕರ ಆರಂಭ ಆಗುತ್ತಿದ್ದಂತೆ ಹಲವಾರು ಕಡೆಗಳಿಂದ ನೌಕರರ ವಜಾ ವರದಿಗಳು ಬರುತ್ತಿವೆ.
ದಕ್ಷಿಣ ರೈಲ್ವೆಯ 48 ಮಂದಿ ಉದ್ಯೋಗಿಗಳನ್ನು ಬೆದರಿಕೆ, ಪ್ರಚೋದನೆ ಮತ್ತು ಮಾಮೂಲು ಕರ್ತವ್ಯ ನಿರ್ವಹಣೆ ನಿರಾಕರಿಸಿದ್ದಕ್ಕಾಗಿ ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ಜನರಲ್ ಮ್ಯಾನೇಜರ್
ಹೇಳಿದ್ದಾರೆ.
ನಿಷ್ಠಾವಂತ ಕೆಲಸಗಾರರಿಗೆ ಬೆದರಿಕೆ ಹಾಕಿದ ಮತ್ತು ರೈಲ್ವೆ ಸಂಚಾರಕ್ಕೂ ತಡೆ ಉಂಟುಮಾಡಿದ ಆಪಾದನೆಗಾಗಿ ಪೂರ್ವ ರೈಲ್ವೆಯಲ್ಲಿ 40 ನೌಕರರನ್ನು ವಜಾ ಮಾಡಲಾಗಿದೆ. ಇದೇ ಕಾರಣಕ್ಕಾಗಿ ದಕ್ಷಿಣ ಮಧ್ಯ ರೈಲ್ವೆಯ 12 ಮಂದಿ ನೌಕರರನ್ನು ವಜಾ ಮಾಡಲಾಗಿದೆ.