ಹ್ಯೂಸ್ಟನ್, ಏ. 16– ಧರೆಗೆ ವಾಪಸಾಗುತ್ತಿರುವ ಅಪೊಲೊ– 13ರ ಗಗನಯಾತ್ರಿಗಳು ಇಂದು ಹದಿನೈದು ಸೆಕೆಂಡುಗಳ ಕಾಲ ರಾಕೆಟ್ ಎಂಜಿನ್ ಸಿಡಿಸಿ ಅಪಾಯಕಾರಿ ಪಥದಿಂದ ಪಾರಾದರು.
ರಾಕೆಟ್ ಎಂಜಿನ್ ಸಿಡಿಸುವ ಕಾರ್ಯ ಯಶಸ್ವಿಯಾಗಿದ್ದು ಅಪೊಲೊ– 13 ಬಾಹ್ಯಾಕಾಶ ನೌಕೆ ಈಗ ಸರಿಯಾದ ಪಥದಲ್ಲಿ ಧರೆಗೆ ವಾಪಸಾಗುತ್ತಿದೆ.
ಅಪೊಲೊ– 13 ಗಗನಯಾತ್ರಿಗಳಿಗೆ ಇನ್ನುಳಿದಿರುವ ಗಂಡಾಂತರವೆಂದರೆ ವಾಯುಮಂಡಲ ಪ್ರವೇಶಿಸುವಾಗ ಉತ್ಪತ್ತಿಯಾಗುವ ತೀವ್ರ ಶಾಖ. ಬಾಹ್ಯಾಕಾಶ ನೌಕೆ ಈ ತೀವ್ರ ಶಾಖವನ್ನು ತಡೆದುಕೊಂಡು ಅಪಾಯದಿಂದ ಪಾರಾಗುವುದೇ ಎಂಬುದೊಂದೇ ಈಗಿರುವ ಭೀತಿ.
ರಾಜ್ಯದ ಖಾಸಗಿ ಶಾಲೆ ಶಿಕ್ಷಕರಿಗೂ ರಾಜಕೀಯ ಪ್ರವೇಶ ನಿಷೇಧ?
ಬೆಂಗಳೂರು, ಏ. 16– ಸರ್ಕಾರದಿಂದ ಸಹಾಯ ಪಡೆಯುವ ರಾಜ್ಯದ ಖಾಸಗಿ ಶಾಲೆಗಳ ಶಿಕ್ಷಕರು ಸರ್ಕಾರದ ಶಾಲಾ ಶಿಕ್ಷಕರಿಗೆ ಅನ್ವಯಿಸುವ ನಿಯಮಗಳಿಗೆ ಬದ್ಧರಾಗಬೇಕೆಂದು ಕಡ್ಡಾಯ ಮಾಡುವ ಸಂಭವವಿದೆ.
ಈ ಸಂಬಂಧದಲ್ಲಿ ಸರ್ಕಾರದ ಸೂಚನೆಗಳು ಸಿದ್ಧವಾಗಿದ್ದು ಅವುಗಳನ್ನು ಏಪ್ರಿಲ್ 28ರಂದು ಸೇರಲಿರುವ ಶಿಕ್ಷಣ ಕುರಿತ ರಾಜ್ಯ ಸಲಹಾ ಮಂಡಲಿಯ ಮುಂದೆ ಮಂಡಿಸಲಾಗುವುದು.
ಸರ್ಕಾರ ಸಿದ್ಧಪಡಿಸಿರುವ ಸೂಚನೆಯಂತೆ ಖಾಸಗಿ ಶಾಲಾ ಶಿಕ್ಷಕರು ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿ ಯಾಗಲೀ ರಾಜಕೀಯದಲ್ಲಿ ಭಾಗವಹಿಸುವುದನ್ನು ಪ್ರತಿಬಂಧಿಸಲಾಗುವುದು.