ಭಾರತ– ಪಾಕ್ ಭಿನ್ನಾಭಿಪ್ರಾಯ ನಿವಾರಣೆಗೆ ಮಾತುಕತೆ ಮದ್ದು, ಯುದ್ಧವಲ್ಲ: ಯಹ್ಯಾಖಾನ್
ಪ್ಯಾರಿಸ್, ಅ. 19– ಪಾಕಿಸ್ತಾನ ಮತ್ತು ಭಾರತದ ನಡುವಣ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಬೇಕೇ ಹೊರತು ಯುದ್ಧದಿಂದಲ್ಲ ಎಂದು ಪಾಕಿಸ್ತಾನದ ಅಧ್ಯಕ್ಷ ಯಹ್ಯಾಖಾನ್ರವರು ಇಲ್ಲಿ ಇಂದು ಪ್ರಕಟವಾದ ಸಂದರ್ಶನ ವೊಂದರಲ್ಲಿ ತಿಳಿಸಿದರು.
‘ಯುದ್ಧವು ಎರಡೂ ರಾಷ್ಟ್ರಗಳ ಜನತೆಯ ಕಷ್ಟಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರಿಂದ ನಿರಾಶ್ರಿತರ ಸಮಸ್ಯೆ ಬಗೆಹರಿಯದು’ ಎಂದು ಅವರು ಫ್ರೆಂಚ್ ದಿನಪತ್ರಿಕೆ ‘ಲೇಮಾಂಡ್’ಗೆ ತಿಳಿಸಿದರು.
ಪಕ್ಷದ ಒಗ್ಗಟ್ಟಿನಲ್ಲಿ ತಮಗೆ ಸಂಶಯವಿಲ್ಲ ಎಂದು ಪ್ರಧಾನಿ ಸ್ಪಷ್ಟನೆ
ನವದೆಹಲಿ, ಅ. 19– ಮುಂಬರುವ ಚುನಾವಣೆಗಳನ್ನು ಎದುರಿಸಲು ಮಾತ್ರವೇ ಅಲ್ಲದೇ, ಪಕ್ಷದ ವಾಗ್ದಾನಗಳನ್ನು ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದರಲ್ಲಿ ತಮ್ಮ ಪಕ್ಷ ಐಕ್ಯಮತದಿಂದ ಇರುತ್ತದೆಂಬುದರಲ್ಲಿ ತಮಗೆ ಎಳ್ಳಷ್ಟೂ, ಸಂಶಯವಿಲ್ಲವೆಂದೂ ಪ್ರಧಾನಿ ಇಂದಿರಾಗಾಂಧಿ ಅವರು ಇಂದು ಇಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ಕೊಡುತ್ತಿದ್ದ ಪ್ರಧಾನಿ ಅವರು, ‘ಯಾವುದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ವೈಯಕ್ತಿಕ ಆಕಾಂಕ್ಷಿಗಳು ಮತ್ತುವಿರೋಧಿ ಗುಂಪುಗಳು ಇದ್ದೇ ಇರುತ್ತವೆ. ಅಲ್ಲದೆ ಇವು ಪ್ರಜಾಸತ್ತೆ ವ್ಯವಸ್ಥೆಯ ಅಂಗ’ ಎಂದೂ ತಿಳಿಸಿದರು.