ಸೊಂಡೂರು, ಜ. 31– ಬಯಸಿದವರನ್ನೆಲ್ಲಾ ತೃಪ್ತಿಪಡಿಸಬೇಕಾದರೆ ಮುಖ್ಯಮಂತ್ರಿ ದೇವರಾಜ ಅರಸು ಅವರು ಕನಿಷ್ಠ 100 ಮಂದಿ ಸದಸ್ಯರ ಮಂತ್ರಿ ಮಂಡಲವನ್ನಾದರೂ ರಚಿಸಬೇಕಾಗುತ್ತದೆ.
ಮಂತ್ರಿ ಏಕಾಗಬೇಕು? ಮಂತ್ರಿ ಆಗಲು ಏನೇನು ವಿಷಯಾನುಭವ ಹಾಗೂ ತಿಳಿವಳಿಕೆ ಇರಬೇಕು? ಎಂಬ ಬಗ್ಗೆ ಯಾರ ಗಮನವೂ ಇಲ್ಲ.
ಮುಖ್ಯಮಂತ್ರಿ ರೀತ್ಯ ‘ನಾನೂ ಮಂತ್ರಿಯಾಗಬೇಕು’ ಎಂಬುದು ಬಹುತೇಕ ಶಾಸಕರಲ್ಲಿರುವ ಆಸೆ. ಸೊಂಡೂರು ಪುರಸಭೆ ನೀಡಿದ ಬಿನ್ನವತ್ತಳೆಗೆ ಉತ್ತರವಾಗಿ
ಮುಖ್ಯಮಂತ್ರಿಗಳು ಮಾಡಿದ ಭಾಷಣದಲ್ಲಿ ‘ಸಮಾಜದ ಎಲ್ಲ ರಂಗದಲ್ಲೂ ಅನಾಯಕತ್ವವೇ ಹೆಚ್ಚುತ್ತಿದೆ’ ಎಂಬ ವಿಷಯವನ್ನು ಸಮಗ್ರ ದೃಷ್ಟಿಯಿಂದ ವಿಶ್ಲೇಷಿಸಿದರು.
ಇತರ ಯಾವ ಉದ್ಯೋಗಕ್ಕೇ ಆಗಲಿ, ಒಂದು ಕನಿಷ್ಠ ಅರ್ಹತೆ ನಿಗದಿಯಾಗಿದ್ದರೂ ರಾಜಕಾರಣಿಗೆ ಯಾವ ಅರ್ಹತೆ ಅಥವಾ ತರಬೇತು ನಿಗದಿ ಆಗದಿರುವುದೇ ಈ ಪರಿಸ್ಥಿತಿಗೆ ಮೂಲ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ಅನಾಯಕತ್ವ ಹೆಚ್ಚುತ್ತಿದೆ ಎಂಬ ವಿಷಯದ ವಿಶ್ಲೇಷಣೆ ಕಾಲದಲ್ಲಿ ಎಲ್ಲ ಹಂತಗಳಲ್ಲೂ ವಿಚಾರವಂತ ನಾಯಕರು ರೂಪಿತವಾಗಬೇಕೆಂದು ಅವರು ಒತ್ತಿ ಹೇಳಿದರು.
ಮುಂಬೈನಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತ ರಕ್ಷಣೆಗೆ ಸರ್ವ ಕ್ರಮ
ಮುಂಬೈ, ಜ. 31– ಮಹಾರಾಷ್ಟ್ರದಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತ ಸಂರಕ್ಷಿಸಲು ತಮ್ಮ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಕ್ಕೂ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ವಿ.ಪಿ. ನಾಯಕ್ ಅವರು ಆಶ್ವಾಸನೆ ನೀಡಿದರು.
ಯಾವುದೇ ರಾಜ್ಯಕ್ಕೆ ಸೇರಿದವರಾಗಿರಲಿ, ತಮ್ಮ ರಾಜ್ಯ ಮತ್ತು ಮುಂಬೈ ನಗರದಲ್ಲಿ ತಮ್ಮ ತಮ್ಮ ಉದ್ಯಮ, ವಾಣಿಜ್ಯಗಳಲ್ಲಿ ತೊಡಗಬಹುದೆಂದು ಎ.ಪಿ.ಎಂ.ಸಿ ಸರ್ವ ಸದಸ್ಯರ ಸಭೆ ಉದ್ದೇಶಿಸಿ ಭಾಷಣ ಮಾಡುತ್ತಾ ಅವರು ಸ್ಪಷ್ಟಪಡಿಸಿದರು.