ಎಪ್ಪತ್ತರ ದಶಕದಾದ್ಯಂತ ಉಕ್ಕಿನ ತೀವ್ರ ಅಭಾವ ನವದೆಹಲಿ, ಡಿ. 30– ಎಪ್ಪತ್ತರ ದಶಕದಾದ್ಯಂತ ದೇಶವು ಉಕ್ಕಿನ ತೀವ್ರ ಅಭಾವವನ್ನು ಎದುರಿಸಬೇಕಾಗುವುದೆಂದು ಕೇಂದ್ರ ಸರ್ಕಾರದ ಉಕ್ಕು ಮತ್ತು ಭಾರಿ ಎಂಜಿನಿಯರಿಂಗ್ ಶಾಖೆ ಸಚಿವ ಶ್ರೀ ಬಲಿರಾಂ ಭಗತ್ ಅವರು ಇಂದು ಇಲ್ಲಿ ಹೇಳಿದರು.
ಉಕ್ಕಿನ ಬಗ್ಗೆ ಈಗ ಉಂಟಾಗಿರುವ ಅಭಾವ ತಾತ್ಕಾಲಿಕವಾದುದೇನಲ್ಲ ಎಂಬುದು ರಹಸ್ಯದ ವಿಷಯವೇನಲ್ಲ ಎಂದೂ ಅವರು ಎಂಜಿನಿಯರಿಂಗ್ ರಫ್ತು ಅಭಿವೃದ್ಧಿ ಮಂಡಲಿಯ ಹದಿನೈದನೇ ವಾರ್ಷಿಕ ಸಭೆಯನ್ನು ಉದ್ಘಾಟಿಸುತ್ತಾ ಹೇಳಿದರು.
ಉಕ್ಕಿನ ಅಭಾವದಿಂದ ಉದ್ಭವಿಸಿರುವ ಪರಿಸ್ಥಿತಿಯನ್ನೆದುರಿಸಲು ಸರ್ಕಾರ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಾರ್ಖಾನೆಗಳು ಸಾಧ್ಯವಾದಷ್ಟು ಉಕ್ಕನ್ನು ತಯಾರಿಸುವಂತೆ ಮಾಡಲಾಗಿದೆ. ಅದೂ ಅಲ್ಲದೆ ಈಗಿರತಕ್ಕ ಕಾರ್ಖಾನೆಯಲ್ಲಿ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಸಚಿವರು ಹೇಳಿದರು.
ಭಾರತೀಯ ವಿಜ್ಞಾನ ಕಾಂಗ್ರೆಸ್ ಮಹಾಧಿವೇಶನ: ನಗರದಲ್ಲಿ ಸಿದ್ಧತೆ ಬೆಂಗಳೂರು, ಡಿ. 30– ಇಪ್ಪತ್ತು ವರ್ಷಗಳ ನಂತರ ಮತ್ತೆ ನಗರದಲ್ಲಿ ಸಮಾವೇಶಗೊಳ್ಳುತ್ತಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್ ಮಹಾಧಿವೇಶನಕ್ಕೆ ಸೆಂಟ್ರಲ್ ಕಾಲೇಜು ಆವರಣದಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.
ಪ್ರಪಂಚದ ನಾನಾ ಭಾಗಗಳಿಂದ ವಿಶೇಷ ಆಹ್ವಾನದ ಮೇಲೆ ಆಗಮಿಸಲಿರುವ 30 ಮಂದಿ ವಿಜ್ಞಾನಿಗಳೂ ಸೇರಿ ಸುಮಾರು 3,500 ಮಂದಿ ವಿಜ್ಞಾನದ ವಿವಿಧ ಭಾಗಗಳ ಪ್ರತಿನಿಧಿಗಳು ಅದರಲ್ಲಿ ಪಾಲ್ಗೊಳ್ಳಲಿದ್ದಾರೆ.