ಮೂವರು ಸಚಿವರಿರುವ ಅರಸು ಸಂಪುಟದಿಂದ ಪ್ರಮಾಣ ಸ್ವೀಕಾರ ಬೆಂಗಳೂರು, ಮಾರ್ಚ್ 20– ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರ ಮೂವರು ಸದಸ್ಯರ ಸಚಿವ ಸಂಪುಟ ಇಂದು ಮಧ್ಯಾಹ್ನ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿ 359 ದಿನಗಳ ನಂತರ ಕರ್ನಾಟಕದಲ್ಲಿ ಮತ್ತೆ ಜನತಾ ಸರ್ಕಾರ ಅಸ್ತಿತ್ವಕ್ಕೆ ಬಂದಿತು.
ರಾಷ್ಟ್ರಪತಿಗಳು ತಮ್ಮ ಆಡಳಿತವನ್ನು ರದ್ದುಪಡಿಸಿ ಆಜ್ಞೆ ಹೊರಡಿಸಿದರು. ಸಂವಿಧಾನ ರೀತ್ಯ ಮತ್ತೊಂದು ಪ್ರಕಟಣೆಯ ಮೂಲಕ ನೂತನ ವಿಧಾನಸಭೆಯೂ ಅಸ್ತಿತ್ವಕ್ಕೆ ಬಂದಿತು. ಜೊತೆಗೆ ಮಂತ್ರಿಮಂಡಲದ ಪ್ರಮಾಣವಚನವೂ ನಡೆದು ಸರ್ಕಾರವೂ ಸ್ಥಾಪಿತವಾಯಿತು.
ಕಾನೂನಿನ ದೃಷ್ಟಿಯಲ್ಲಿ ಈ ಮೂರು ಘಟನೆಗಳು ಏಕಕಾಲದಲ್ಲಿ ಒಂದಾದ ಮೇಲೆ ಇನ್ನೊಂದು ನಡೆದ ಘಟನೆಗಳು.
ರಾಜಭವನದ ಹುಲ್ಲಿನ ಮೈದಾನದಲ್ಲಿ ಹಾಕಲಾಗಿದ್ದ ಭಾರಿ ಷಾಮಿಯಾನದಲ್ಲಿ ರಾಜ್ಯಪಾಲ ಶ್ರೀ ಸುಖಾಡಿಯಾ ಅವರು ಮುಖ್ಯಮಂತ್ರಿ ಹಾಗೂ ಇತರ ಇಬ್ಬರು ಸಚಿವರಿಗೆ ಪ್ರತಿಜ್ಞೆ ಮಾಡಿಸಿದರು.
ಕನ್ನಡದಲ್ಲಿ ಪ್ರತಿಜ್ಞಾವಿಧಿಯನ್ನು ಹಿಂದಿಯಲ್ಲಿ ಬರೆದುಕೊಂಡು ರಾಜ್ಯಪಾಲರು ಸ್ಪಷ್ಟವಾಗಿ ಓದಿದರು.
ಸ್ಪಷ್ಟ ಹಾಗೂ ಸರಿಯಾದ ಉಚ್ಚಾರಣೆಯಿಂದ ಕನ್ನಡದಲ್ಲಿ ಪ್ರತಿಜ್ಞೆ ಮಾಡಿಸಿದ ರಾಜ್ಯಪಾಲರನ್ನು ಅನೇಕರು ಅಭಿನಂದಿಸಿದರು.