ಸಕ್ಕರೆ ಬೆಲೆ ಕುಸಿತ: ಕಾರ್ಖಾನೆಗಳ ಭವಿಷ್ಯಕ್ಕೆ ಭಾರಿ ಆತಂಕ
ಬೆಂಗಳೂರು, ಜು. 10– ಕೆಲವು ದಿನಗಳಿಂದ ಒಂದೇ ಸಮನೆ ಕುಸಿಯುತ್ತಿರುವ ಸಕ್ಕರೆ ಬೆಲೆ, ಉತ್ಪಾದನಾ ರಂಗಕ್ಕೆ ಭಾರಿ ಆತಂಕ ತಂದೊಡ್ಡಿದೆ. ಕೆಲವು ಸಕ್ಕರೆ ಗಿರಣಿಗಳು ತೀವ್ರ ಬಿಕ್ಕಟ್ಟು ಎದುರಿಸಬೇಕಾಗಬಹುದು.
ಸಕ್ಕರೆ ನಿಯಂತ್ರಣ ಭಾಗಶಃ ರದ್ದಾದ ನಂತರ ಕ್ವಿಂಟಲ್ಗೆ ಸುಮಾರು 400 ರಿಂದ 550 ರೂ. ಗಳವರೆಗೆ ಏರಿದ್ದ ಸಗಟು ಮಾರಾಟದ ಬೆಲೆ ಇಂದು ಕೆಲವೆಡೆ 290 ರೂ.ಗಳಿಗೆ ಇಳಿದಿದೆ. ಮುಂದಿನ ಮೂರು ತಿಂಗಳಲ್ಲಿ ಅದು ಮತ್ತಷ್ಟು ಕುಸಿಯುವ ಸಂಭವವಿದ್ದು ಸುಮಾರು 200 ರೂ.ಗಳನ್ನು ಮುಟ್ಟಬಹುದೆಂದು ಕಳವಳಪಡಲಾಗಿದೆ.
ರಾಜ್ಯದ ಇತ್ತೀಚಿನ ಇತಿಹಾಸ ಸಂಗ್ರಹ: ಸರ್ಕಾರದ ನಿರ್ಧಾರ
ಬೆಂಗಳೂರು, ಜು. 10– ಮೈಸೂರಿನ ಇತ್ತೀಚಿನ ಇತಿಹಾಸ ಸಂಗ್ರಹಕ್ಕೆ ರಾಜ್ಯಸರ್ಕಾರ ನಿರ್ಧರಿಸಿದೆ. ಅದಕ್ಕೆ ಅಗತ್ಯವಾದ ಅಂಕಿಅಂಶಗಳ ಸಂಕಲನದ ಬಗ್ಗೆ ತಜ್ಞರ ಸಲಹೆಯನ್ನು ಪಡೆಯಲು ಇಂದು ಸಚಿವ ಸಂಪುಟ ನಿರ್ಧರಿಸಿತು.
ಮಹಾರಾಷ್ಟ್ರಕ್ಕೆ ಶರಾವತಿ ವಿದ್ಯುತ್
ಬೆಂಗಳೂರು, ಜು. 10– ಶರಾವತಿ ವಿದ್ಯುಚ್ಛಕ್ತಿಯನ್ನು ನೆರೆರಾಜ್ಯವಾದ ಮಹಾರಾಷ್ಟ್ರಕ್ಕೆ ಒದಗಿಸಲು ಮೈಸೂರು ಸರಕಾರ ಒಪ್ಪಿಗೆ ನೀಡಿದೆ.
ರಾಷ್ಟ್ರೀಯ ಶಿಕ್ಷಣ ನೀತಿ: ಕೇಂದ್ರದ ಒಪ್ಪಿಗೆ
ನವದೆಹಲಿ, ಜು. 10– ಶಿಕ್ಷಣ ಬಗೆಗೆ ರಾಷ್ಟ್ರೀಯ ನೀತಿಯೊಂದನ್ನು ನಿರೂಪಿಸಬೇಕೆಂಬ ಶಿಕ್ಷಣ ಸಚಿವ ಡಾ. ತ್ರಿಗುಣ್ ಸೇನ್ ಅವರ ಸಲಹೆಯನ್ನು ಕೇಂದ್ರ ಸಂಪುಟ ಇಂದು ತತ್ವಶಃ ಒಪ್ಪಿಕೊಂಡಿತು.
ರಾಜಧನ ರದ್ದಿಗೆ ಸಮ್ಮತಿ: ಮಾಜಿ ಅರಸರಿಗೆ 3 ತಿಂಗಳ ಅವಕಾಶ
ನವದೆಹಲಿ, ಜು. 10– ಮಾಜಿ ರಾಜರ ರಾಜಧನ ಮತ್ತು ವಿಶೇಷ ಸೌಲಭ್ಯಗಳನ್ನು ರದ್ದುಗೊಳಿಸಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಮ್ಮತಿಸಲು ಮಾಜಿ ರಾಜರುಗಳಿಗೆ ಮೂರು ತಿಂಗಳ ಕಾಲಾವಕಾಶ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಕಮ್ಯುನಿಸ್ಟ್ ಪಕ್ಷದ ಮೌನ
ಚಂಡಿಗಢ, ಜು. 10– ಪಾಕಿಸ್ತಾನಕ್ಕೆ ರಷ್ಯವು ಶಸ್ತ್ರಾಸ್ತ್ರ ನೆರವು ನೀಡುತ್ತದೆಂದು ವರದಿಯಾಗಿರುವ ವಿಷಯದಲ್ಲಿ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲು ಭಾರತದ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀ ಸಿ. ರಾಜೇಶ್ವರ ರಾವ್ ಅವರು ಇಂದು ನಿರಾಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.