ಕೇಪ್ ಕೆನಡಿ (ಪ್ಲಾರಿಡ), ಅ. 11– ಚಂದ್ರ ಗ್ರಹಕ್ಕೆ ಮಾನವರನ್ನು ಕಳಿಸುವ ಯತ್ನದ ಪೂರ್ವ ಪ್ರಯೋಗವಾಗಿ ಅಮೆರಿಕದ ಅಪೋಲೊ –7 ಇಂದು ಯಶಸ್ವಿಯಾಗಿ ಭೂ ಕಕ್ಷೆಯನ್ನು ಪ್ರವೇಶಿಸಿತು.
ಅಧ್ಯಕ್ಷರು, ಸಭಾಪತಿಗಳ ಅವಿರೋಧ ಆಯ್ಕೆ ಸಂಪ್ರದಾಯ ಅನುಷ್ಠಾನಕ್ಕೆ ಶಿಫಾರಸು
ಬೆಂಗಳೂರು, ಅ. 11– ಸಂಸತ್, ಶಾಸನ ಸಭೆಗಳ ಅಧ್ಯಕ್ಷರು ಮತ್ತು ಸಭಾಪತಿಗಳಿಗೆ ಚುನಾವಣೆಯ ಸಮಯದಲ್ಲಿ ಅವಿರೋಧ ಆಯ್ಕೆಗೆ ಅವಕಾಶವಾಗುವಂತೆ, ನಿರ್ದಿಷ್ಟ ಕ್ಷೇತ್ರಗಳನ್ನು ಒದಗಿಸುವ ಸಂಪ್ರದಾಯ ಆರಂಭಿಸುವ ಸೂಚನೆಯನ್ನು ತಿರುವನಂತಪುರದಲ್ಲಿ ಜರುಗಿದ ಅಧ್ಯಕ್ಷರು ಮತ್ತು ಸಭಾಪತಿಗಳ ಸಮ್ಮೇಳನ ನೀಡಿದೆ.
ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ತ್ರಿಪಕ್ಷ ಗೋಷ್ಠಿ: ಷೇಖ್ ಕರೆ
ಶ್ರೀನಗರ, ಅ. 11– ವಿಶ್ವಸಂಸ್ಥೆ ರಕ್ಷಣೆಯ ಆಶ್ವಾಸನೆಯೊಂದಿಗೆ ಸ್ವತಂತ್ರ ಕಾಶ್ಮೀರ ಸ್ಥಾಪನೆಯನ್ನು ಪರಿಶೀಲಿಸುವಂತೆ ಷೇಖ್ ಅಬ್ದುಲ್ಲಾ ಅವರು ಇಂದು ಇಲ್ಲಿ 5 ದಿನಗಳ ರಾಜ್ಯ ಜನತಾ ಸಮ್ಮೇಳನದಲ್ಲಿ ಭಾಗವಹಿಸಿರುವ ಪ್ರತಿನಿಧಿಗಳಿಗೆ ಸಲಹೆ ಮಾಡಿದರು.
ಭಗತ್ಸಿಂಗ್ ಗೌರವಾರ್ಥ 20 ಪೈಸೆ ಅಂಚೆ ಚೀಟಿ
ನವದೆಹಲಿ, ಅ. 11– ಸರ್ದಾರ್ ಭಗತ್ಸಿಂಗ್ ಅವರ ಗೌರವಾರ್ಥ ಈ ತಿಂಗಳ 19 ರಂದು ಇಪ್ಪತ್ತು ಪೈಸೆಯ ಸ್ಮಾರಕ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗುವುದು.