ಬೆಂಗಳೂರು, ನ. 11– ಮೂರು ದಿನಗಳ ಕಾಲ ದೆಹಲಿಯಲ್ಲಿರುವ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು, ಇತರ ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿ ಮಾಡಿ, ಮಹಾಜನ್ ವರದಿಯನ್ನು ಸಂಸತ್ತಿನ ಸಮಿತಿಯೊಂದಕ್ಕೆ ಕಳುಹಿಸಬೇಕೆಂಬ ಸಲಹೆಯನ್ನು ಒಪ್ಪಿಕೊಳ್ಳಬಾರದೆಂದು ಮನವಿ ಮಾಡಲಿದ್ದಾರೆ.
ಬೆಳಿಗ್ಗೆ ಪ್ರವಾಸದಿಂದ ಹಿಂದಿರುಗಿದ ಮುಖ್ಯಮಂತ್ರಿಯವರು, ಮಧ್ಯಾಹ್ನ ದೆಹಲಿಗೆ ಪ್ರಯಾಣ ಮಾಡಿದರು. ಶ್ರೀಯುತರು ನಾಳೆ ಪ್ರಧಾನಿ ಅವರನ್ನು ಭೇಟಿ ಮಾಡುವ ಸಂಭವವಿದೆ. ಕಾವೇರಿ ಯೋಜನೆಗಳಿಗೆ ಕೇಂದ್ರದ ಮಂಜೂರಾತಿಗಾಗಿ ಮುಖ್ಯಮಂತ್ರಿ ಒತ್ತಾಯ ಮಾಡಲಿದ್ದಾರೆ. ಸಂದರ್ಭ ಒದಗಿಬಂದಲ್ಲಿ ಗಡಿ ಸಮಸ್ಯೆಯ ಬಗ್ಗೆ ತಮ್ಮ ನಿಲುವನ್ನು ಮತ್ತೊಮ್ಮೆ ಪ್ರತಿಪಾದಿಸಲಿದ್ದಾರೆ.
‘ಶಾಸ್ತ್ರಿ ನಿಧನದ ಬಗ್ಗೆ ತನಿಖೆ ಇಲ್ಲ’
ನವದೆಹಲಿ, ನ. 11– ತಷ್ಕೆಂಟ್ನಲ್ಲಿ 1966ರ ಜನವರಿ 11ರಂದು ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರಿ ಅವರು ಸತ್ತ ಸಂದರ್ಭದ ಬಗ್ಗೆ ತನಿಖೆ ನಡೆಸುವುದಕ್ಕೆ ಕೇಂದ್ರಕ್ಕೆ ಯಾವ ಸಮರ್ಥನೆಯೂ ಕಾಣದು ಎಂದು ಕೇಂದ್ರ ಗೃಹ ಖಾತೆಯಲ್ಲಿ ಸ್ಟೇಟ್ ಸಚಿವರಾಗಿರುವ ಶ್ರೀ ಕೆ.ಸಿ.ಪಂತ್ ಅವರು ಇಂದು ಲೋಕಸಭೆಯಲ್ಲಿ ಶ್ರೀ ರಾಮಚರಣ್ ಅವರಿಗೆ ತಿಳಿಸಿದರು.