ನಿರುದ್ಯೋಗಿ ಕೃಷಿ ಪದವೀಧರರನ್ನು ನೆಲೆಗೊಳಿಸಲು ರಾಜ್ಯದ ಯೋಜನೆ
ಬೆಂಗಳೂರು, ನ. 18– ರಾಜ್ಯದ ನಿರುದ್ಯೋಗಿ ಕೃಷಿ ಪದವೀಧರರನ್ನು ಜಮೀನಿನ ಮೇಲೆ ನೆಲೆಗೊಳಿಸುವ ಬೃಹತ್ ಯೋಜನೆಯನ್ನು ಚಿಕ್ಕಮಗಳೂರು ಜಿಲ್ಲೆಯಿಂದ ರಾಜ್ಯ ಸರ್ಕಾರ ಆರಂಭಿಸಲಿದೆ.
ತಲಾ 12 ಎಕರೆ ಭೂಮಿ ಹಾಗೂ ಕೃಷಿಗೆ ಅಗತ್ಯವಾದ ಸೌಕರ್ಯಗಳನ್ನೆಲ್ಲ ಪಡೆಯುವ 50 ಮಂದಿ ನಿರುದ್ಯೋಗಿ ಕೃಷಿ ಪದವೀಧರರನ್ನು ಮೊದಲಿಗೆ ನೆಲೆಗೊಳಿಸಲಾಗುವುದು.
ಇಂದು ನಡೆದ ಮಂತ್ರಿಮಂಡಲದ ಸಭೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 100 ಮಂದಿ ನಿರುದ್ಯೋಗಿಗಳನ್ನು ನೆಲೆಗೊಳಿಸುವ 60 ಲಕ್ಷ ರೂಪಾಯಿಯ ವಿಶೇಷ ಯೋಜನೆಯನ್ನು ಅಂಗೀಕರಿಸಿತು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಈ ಹಣವನ್ನು ಒದಗಿಸುವುದು, ರಾಜ್ಯ ಸರ್ಕಾರ ಈ ಹಣಕ್ಕೆ ಖಾತರಿ ನಿಲ್ಲುವುದು.
ಎಕ್ಸೈಜ್ ತೆರಿಗೆ ರೂಪದಲ್ಲಿ ಶಿಕ್ಷಣ ಶುಲ್ಕ ವಸೂಲಿ ಅಕ್ರಮ: ಸುಪ್ರೀಂ ಕೋರ್ಟ್ ತೀರ್ಪು
ನವದೆಹಲಿ, ನ. 18– ಅಬಕಾರಿ ಕಂಟ್ರಾಕ್ಟರುಗಳಿಂದ ಎಕ್ಸೈಜ್ ಸುಂಕವಾಗಿ ಶಿಕ್ಷಣ ಶುಲ್ಕ ವಸೂಲಿ ಮಾಡುವುದನ್ನು ರದ್ದುಗೊಳಿಸಿ ಮೈಸೂರು ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ನ ಸಂವಿಧಾನಕ್ಕೆ ಸಂಬಂಧಿಸಿದ ಬೆಂಚ್ ಇಂದು ಎತ್ತಿಹಿಡಿಯಿತು.
ಶಿಕ್ಷಣ ಶುಲ್ಕವನ್ನು ವಸೂಲಿ ಮಾಡಲು ರಾಜ್ಯ ಸರ್ಕಾರಕ್ಕೆ ಯಾವ ಅಧಿಕಾರವೂ ಇಲ್ಲವೆಂಬ ಹೈಕೋರ್ಟ್ನ ತೀರ್ಪನ್ನು ಬದಲಾಯಿಸಲು ಯಾವ ಕಾರಣವೂ ಇಲ್ಲವೆಂದು ತಿಳಿಸಿ, ನ್ಯಾಯಾಲಯವು ರಾಜ್ಯ ಸರ್ಕಾರದ ಅಪೀಲನ್ನು ವಜಾ ಮಾಡಿದೆ.
ಎಕ್ಸೈಜ್ ಸುಂಕದ ಅಂಗವಾಗಿ ಶಿಕ್ಷಣ ಶುಲ್ಕವನ್ನು ಮೈಸೂರು ಸರ್ಕಾರವು ಅಬಕಾರಿ ಕಂಟ್ರಾಕ್ಟರುಗಳಿಂದ ವಸೂಲಿ ಮಾಡುತ್ತಿದ್ದಿತು.