ಬೆಂಗಳೂರು, ಸೆ. 15– ಹಬ್ಬದ ಕಾಲ ಬಂದಿದೆ. ಶ್ರೀಕೃಷ್ಣ ಜಯಂತಿ ಕಳೆಯಿತು. ಈಗ ಗೌರಿ– ಗಣೇಶನ ಹಬ್ಬ. ಮುಂದೆ ಬರಲಿದೆ ನವರಾತ್ರಿ– ನಾಡಹಬ್ಬ. ದೀಪಾವಳಿಯೂ ದೂರವಿಲ್ಲ. ಹಬ್ಬಕ್ಕೆ ಬೇಕು ವಿಶೇಷ ಅಡುಗೆ. ಮಾಂಸದೂಟ. ಹಬ್ಬ ಬಿಡಿ; ದಿನನಿತ್ಯದ ಬಳಕೆಗೂ ಪಲ್ಯ, ಕೋಸಂಬರಿ, ಅನ್ನ ಸಾರು ಬೇಡವೇ? ಪೂಜೆ ಪುನಸ್ಕಾರಕ್ಕೆ ಸಾಮಗ್ರಿ ಬೇಡವೇ? ಇದಕ್ಕೆಲ್ಲ ಪೇಟೆಯಲ್ಲಿ ಗಂಟು ಬಿಚ್ಚಬೇಕು. ಈ ಬಾರಿ ಕೆಳದ ಬಾರಿಗಿಂತ ದೊಡ್ಡ ಗಂಟೇ ಬೇಕು. ‘ಪ್ರಜಾವಾಣಿ’ ಸಾಮಾನ್ಯ ಜನರನ್ನು ವಿಚಾರಿಸಿದಾಗ ಅವರನ್ನುವ ಪ್ರಕಾರ, ದಿನಸಿ ಪದಾರ್ಥಗಳ ಬೆಲೆ ಕಳೆದ ವರ್ಷಕ್ಕಿಂತ ಶೇ 25ರಷ್ಟು ಏರಿದ್ದರೆ ತರಕಾರಿ, ಹಣ್ಣು– ಹಂಪಲುಗಳ ಬೆಲೆ ಶೇ 75ರಿಂದ 100ರಷ್ಟು ಏರಿದೆ.