ದೂರದಿಂದ ಬ್ರಿಟನ್ ಆಜ್ಞೆ ಮಾಡುವ ಕಾಲ ಮುಗಿದಿದೆ: ಇಂದಿರಾ ಬಿಚ್ಚುಮಾತು
ನವದೆಹಲಿ, ಡಿ. 2– ಯಾವುದೇ ರೀತಿಯ ಆಕ್ರಮಣವನ್ನೂ ನಡೆಸದಿರುವ ಭಾರತವನ್ನು ಆಕ್ರಮಣ ಎಸಗಿರುವ ರಾಷ್ಟ್ರವೆಂದು ಕರೆದರೆ ಅದಕ್ಕಾಗಿ ಭಾರತ ಚಿಂತಿಸದು ಎಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಘೋಷಿಸಿದರು.
ಪ್ರಸ್ತುತ ಉಂಟಾಗಿರುವ ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಬೆಂಬಲ ವ್ಯಕ್ತಪಡಿಸಲು ತಮ್ಮ ನಿವಾಸದೆದುರು ಸಭೆ ಸೇರಿದ್ದ ಆಡಳಿತ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಇಂದಿರಾ ಅವರು ಇತ್ತೀಚಿನ ಲಂಡನ್ ಪತ್ರಿಕೆಗಳ ವರದಿಗೆ ಪ್ರತಿಕ್ರಿಯೆಯಾಗಿ ಈ ರೀತಿ ನುಡಿದರು.
‘ಕಳೆದ ಐದು ವರ್ಷಗಳಲ್ಲಿ ಕಾಲ ಬದಲಾಗಿದೆ. ಆಕ್ರಮಣ ಎಸಗುವ ರಾಷ್ಟ್ರವೆಂದು ಕರೆಯುವ ಮೂಲಕ ರಾಷ್ಟ್ರೀಯ ಹಿತಾಸಕ್ತಿ ಮರೆಯುವಂತೆ ನಮ್ಮ ಮೇಲೆ ಒತ್ತಡ ಹೇರಬಹುದೆಂದು ಯಾವ ರಾಷ್ಟ್ರವಾದರೂ ಯೋಚಿಸಿದ್ದಲ್ಲಿ ಅಂಥ ರಾಷ್ಟ್ರ ತನ್ನದೇ ಆದ ಭ್ರಮೆಯ ಲೋಕದಲ್ಲಿ ವಿಹರಿಸುತ್ತಿದೆಯಂದಷ್ಟೇ ಹೇಳಬಹುದು’ ಎಂದು ತಿಳಿಸಿದರು.