ಬೆಂಗಳೂರು, ಅ. 21– ಬಂಡೀಪುರ ಅರಣ್ಯ ಪ್ರದೇಶದಿಂದ 13 ದಿನಗಳ ಹಿಂದೆ ಅಪಹರಿಸಲ್ಪಟ್ಟಿದ್ದ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಸೇನಾನಿ ಹಾಗೂ ಕೃಷಿ ವಿಜ್ಞಾನಿ ಡಾ.ಮೈಥಿ ಅವರುಸೇರಿದಂತೆ ಆರು ಜನ ಒತ್ತೆಯಾಳುಗಳನ್ನು ಕುಖ್ಯಾತ ನರಹಂತಕ ವೀರಪ್ಪನ್ ಇಂದು ಬೆಳಿಗ್ಗೆ ಸ್ವಇಚ್ಛೆಯಿಂದ ಬಿಡುಗಡೆ ಮಾಡಿದ.
ವೀರಪ್ಪನ್ ಈ ತಿಂಗಳ 25ರ ಒಳಗಾಗಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಲು ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರ ಗಳು ನಿರ್ಧರಿಸಿದ್ದವು.
ಉತ್ತರಪ್ರದೇಶಕ್ಕೆ ರಾಷ್ಟ್ರಪತಿ ಆಡಳಿತ ಜಾರಿಗೆ ಕೇಂದ್ರದ ಶಿಫಾರಸು
ನವದೆಹಲಿ, ಅ. 21– ಉತ್ತರಪ್ರದೇಶದ ವಿಧಾನಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಲು ಕೇಂದ್ರ ಸಚಿವ ಸಂಪುಟವು ಇಂದು ಶಿಫಾರಸು ಮಾಡಿದೆ.
ಏಳು ತಾಸುಗಳ ಸುದೀರ್ಘ ಸಭೆಯ ನಂತರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸುವಂತೆ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರಿಗೆ ಕೇಂದ್ರ ಸಂಪುಟ ಶಿಫಾರಸು ಮಾಡಿತು.