ಕುಣಿಗಲ್ನಲ್ಲಿ ನಡೆದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಪುರಸಭೆಯ ಎಂಜಿನಿಯರ್ ಒಬ್ಬರಿಗೆ, ಸಭೆ ಮುಗಿಯುವವರೆಗೂ ಎದ್ದು ನಿಲ್ಲುವ ಶಿಕ್ಷೆಯನ್ನು ಸಂಸದ ಡಿ.ಕೆ.ಸುರೇಶ್ ಅವರು ವಿಧಿಸಿದರೆಂಬ ವರದಿ (ಪ್ರ.ವಾ., ಆ. 9) ಓದಿ ದಿಗ್ಭ್ರಮೆಗೊಂಡೆ.
ಇಂದು ಶಾಲೆಗಳಲ್ಲೂ ಮಕ್ಕಳಿಗೆ ಅವಮಾನವಾಗುವ ರೀತಿಯಲ್ಲಿ ಯಾವುದೇ ದೈಹಿಕ ಶಿಕ್ಷೆಯನ್ನು ಕೊಡುವಂತಿಲ್ಲ. ಅಂಥದ್ದರಲ್ಲಿ ಒಬ್ಬ ಸರ್ಕಾರಿ ಅಧಿಕಾರಿಗೆ ಹೀಗೆ ತುಂಬಿದ ಸಭೆಯಲ್ಲಿ ಎದ್ದು ನಿಲ್ಲುವಂತಹ ಶಿಕ್ಷೆ ನೀಡುವುದು ಎಷ್ಟು ಸರಿ? ಹೀಗೆ ಮಾಡಿದ್ದರಿಂದಲೇ ನಂತರದ ಸಭೆ ಗಂಭೀರವಾಗಿ ನಡೆಯಿತು ಎಂದು ಸಂಸದರು ಹೇಳಿಕೊಳ್ಳಬಹುದು.
ಮಹತ್ವದ ಸಭೆಯಲ್ಲಿ ಆ ಅಧಿಕಾರಿ ಬೇಜವಾಬ್ದಾರಿಯಿಂದ ನಡೆದುಕೊಂಡದ್ದು ಸಮರ್ಥನೀಯವೇನೂ ಅಲ್ಲ. ಅವರ ವರ್ತನೆಯನ್ನು ಖಂಡಿಸಲು ಬೇರೆ ಶಿಷ್ಟಮಾರ್ಗಗಳಿದ್ದವು. ಆದಾಗ್ಯೂ ದೈಹಿಕ ನೋವಿನೊಂದಿಗೆ ಮಾನಸಿಕ ಹಿಂಸೆಯನ್ನೂ ಅನುಭವಿಸಬೇಕಾದ ಅವರ ವೇದನೆ ಅರ್ಥಮಾಡಿಕೊಳ್ಳುವ ಮನಸ್ಸು ಬೇಕು. ಯಾರನ್ನೇ ಆಗಲಿ ಈ ರೀತಿ ಶಿಕ್ಷಿಸುವ ಅಧಿಕಾರ ಜನಪ್ರತಿನಿಧಿಗಳಿಗೆ ಇದೆಯೇ?