ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡುತ್ತಾರೆ ಎಂಬ ಕಾರಣಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ತರಾತುರಿಯಲ್ಲಿ ₹ 23 ಕೋಟಿ ಖರ್ಚು ಮಾಡಿ ಕೆಲವು ರಸ್ತೆಗಳನ್ನು ದುರಸ್ತಿ ಮಾಡಲಾಗಿತ್ತು. ಜ್ಞಾನಭಾರತಿ ಕ್ಯಾಂಪಸ್ ಬಳಿ ₹ 6 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಮಾಡಿದ್ದ ರಸ್ತೆಯೂ ಅದರಲ್ಲಿ ಸೇರಿದ್ದು, ಮೂರೇ ದಿನಗಳಲ್ಲಿ ಆ ರಸ್ತೆ ಕುಸಿದು ಹೋಗಿರುವುದು ಬಿಬಿಎಂಪಿ ಕಾರ್ಯಗಳ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ಆಗಾಗ ಪ್ರಧಾನಿ ಬರುತ್ತಿರಲಿ, ಅವರು ಬಂದಾಗಲಾದರೂ ಅಭಿವೃದ್ಧಿ ಕಾರ್ಯಗಳು ಚುರುಕಾಗುತ್ತವೆ ಎಂದುಕೊಂಡವರು ಈಗ ಅಂತಹ ಕಾಮಗಾರಿಗಳ ಗುಣಮಟ್ಟವನ್ನು ದೂಷಿಸುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯಗಳಿಗೆ ಭೇಟಿ ನೀಡುವ ಪ್ರಧಾನಿಯವರ ಓಲೈಕೆಗಿಂತ ರಾಜ್ಯದ ಮತದಾರರ ವಿಶ್ವಾಸ ಗಳಿಸುವತ್ತ ಜನಪ್ರತಿನಿಧಿಗಳು ಗಮನಹರಿಸಬೇಕು.