ವಿಶ್ವವಿದ್ಯಾಲಯಗಳಲ್ಲಿನ ಜಾತಿ ವ್ಯವಸ್ಥೆ ಕುರಿತ ರಾಜಕುಮಾರ ಕುಲಕರ್ಣಿ ಅವರ ಲೇಖನ (ಸಂಗತ, ಜೂನ್ 3) ನಿಜಕ್ಕೂ ಎಲ್ಲರ ಅನುಭವಕ್ಕೆ ಬಂದ ಸತ್ಯವನ್ನು ಎತ್ತಿ ತೋರಿದಂತಿದೆ. ಇದು ಕೇವಲ ಪಿಎಚ್.ಡಿ ಸಂಶೋಧನೆಗೆ ಸೀಮಿತವಲ್ಲ, ಎಲ್ಲ ಸ್ತರದ ಶಿಕ್ಷಣ ಸಂಸ್ಥೆಗಳಲ್ಲೂ ಹಬ್ಬಿದೆ ಎಂದರೂ ತಪ್ಪಾಗಲಾರದು. ನನ್ನ ಪದವಿ ಕಾಲೇಜಿನ ಬೋಧಕರೊಬ್ಬರಿಗೆ ಇತ್ತೀಚೆಗೆ ಕರೆ ಮಾಡಿ, ಸಹಜವಾಗಿ ಕಾಲೇಜಿನ ಬಗೆಗೆ ವಿಚಾರಿಸಿದಾಗ ಅವರು ಬೇಸರದಿಂದ ‘ನೀವು ಇದ್ದ ಸಮಯದಲ್ಲಿನ ಕಾಲೇಜು ವ್ಯವಸ್ಥೆ ಈಗಿಲ್ಲ, ಚಿತ್ರಣ ಸಂಪೂರ್ಣ ಬದಲಾಗಿದೆ. ಕಾಲೇಜುಗಳು ಜಾತಿ ಹಾಗೂ ರಾಜಕೀಯದ ಪ್ರಭಾವಕ್ಕೊಳಗಾಗುತ್ತಿವೆ. ಆಯಾ ಜಾತಿಯವರು ತಾವು ಬೆಂಬಲಿಸುವ ರಾಜಕೀಯ ಪಕ್ಷಗಳತ್ತ ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿದ್ದಾರೆ. ಅಧಿಕೃತವಾಗಿ ಮುಖಂಡತ್ವವನ್ನು ಘೋಷಿಸಿಕೊಂಡಿಲ್ಲವಷ್ಟೆ’ ಎಂದರು. ‘ಅಂತಹವರು ಬೋಧಿಸುವ ವಿಷಯಕ್ಕೂ ಅವರ ನಿಲುವಿಗೂ ಹೇಗೆ ತಾನೇ ತಾಳೆ ಆದೀತು’ ಎಂಬ ನನ್ನ ಪ್ರಶ್ನೆಗೆ, ‘ಆತ್ಮದಲ್ಲಿರುವ ಜಾತೀಯತೆ ಈಗ ಹೊರಹೊಮ್ಮಿದೆ. ಅವರೆಂದೂ ಅದರಿಂದ ಹೊರ ಉಳಿಯದವರು’ ಎಂಬ ಉತ್ತರ ಅವರಿಂದ ಬಂತು.