ದೇಶದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆಶಾಭಾವನೆಯಲ್ಲಿರುವಾಗಲೇ ನೆರೆಯ ರಾಜ್ಯಗಳಾದ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವುದು ಜನರಲ್ಲಿ ಪುನಃ ಭೀತಿ ಹುಟ್ಟಿಸುತ್ತಿದೆ. ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ ಭಾರತವು ಸಾಂಕ್ರಾಮಿಕ ರೋಗದ ಅಪಾಯದಿಂದ ಇನ್ನೂ ಹೊರಬಂದಿಲ್ಲ ಎಂಬುದನ್ನು ಮರೆಯಬಾರದು. ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದಂತೆ ಜನ ಚಾಲ್ತಿಯಲ್ಲಿರುವ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಪ್ರವಾಸಿ ತಾಣಗಳು ಹಾಗೂ ದೇವಸ್ಥಾನಗಳು ತುಂಬಿತುಳುಕುತ್ತಿವೆ. ಎರಡನೇ ಅಲೆಯ ಸಂದರ್ಭದಲ್ಲಾದ ತಪ್ಪುಗಳು ಏನಾದರೂ ಮರುಕಳಿಸಿದರೆ ಮತ್ತೆ ಲಾಕ್ಡೌನ್ ಎದುರಾಗಬಹುದು. ಹೀಗಾಗಿ ನಾವು ಮೈಮರೆಯಬಾರದು. ಹಿಂದಿನ ದಿನಗಳ ಭೀಕರ ಅನಾಹುತಗಳು ಮರುಕಳಿಸಬಾರದು.
ಈಗಾಗಲೇ ಸಾವಿರಾರು ಜನರ ಪ್ರಾಣ ಹೋಗಿದೆ. ಹೀಗಾಗಿ ಈ ವಿಚಾರದಲ್ಲಿ ಜಾಗರೂಕರಾಗಿರಬೇಕು. ಕೊರೊನಾ ತಡೆಗಟ್ಟುವಿಕೆಯಲ್ಲಿ ಸರ್ಕಾರಗಳ ಎಚ್ಚರಿಕೆಯ ಕ್ರಮಗಳೊಂದಿಗೆ ಜನರ ಸಹಕಾರವೂ ಅತಿಮುಖ್ಯ. ಕಳೆದ ಬಾರಿಯಂತೆ ಈ ಬಾರಿಯೂ ನಿರ್ಲಕ್ಷ್ಯ ವಹಿಸಿದರೆ ಭವಿಷ್ಯದಲ್ಲಿ ಭಾರಿ ದಂಡ ತೆರಬೇಕಾದ ದುಃಸ್ಥಿತಿ ಬರುವ ಸಾಧ್ಯತೆ ಇಲ್ಲದಿಲ್ಲ.
- ಭೂಮಿಕಾ ದಾಸರಡ್ಡಿ,ಬಿದರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.