ರಾಜ್ಯ ಸರ್ಕಾರದ ವಿಮಾ ಇಲಾಖೆಯನ್ನು ಸರ್ಕಾರಿ ನೌಕರರ ಹಿತ ಕಾಪಾಡುವ, ಅಗತ್ಯಗಳನ್ನು ಪೂರೈಸುವ ಸಂಸ್ಥೆಯಾಗಿ ಕಟ್ಟಿ ಬೆಳೆಸಿದವರು ವಿಶ್ವೇಶ್ವರಯ್ಯನವರು. ಆದರೆ ಇಂದು ಅದು ಸರ್ಕಾರದ ಅತ್ಯಂತ ಭ್ರಷ್ಟ ಇಲಾಖೆಗಳಲ್ಲಿ ಒಂದಾಗಿದೆ ಎಂಬ ಆರೋಪ ಹೊತ್ತಿದೆ. ನೌಕರರು ತಾವೇ ಜಮೆ ಮಾಡಿದ ಹಣವನ್ನು ವಾಪಸ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಎಲ್ಲ ಕೆಲಸಕ್ಕೂ ಹೆಚ್ಚಿನ ಸಿಬ್ಬಂದಿ ನಿರ್ಲಜ್ಜೆಯಿಂದ ಲಂಚಕ್ಕೆ ಕೈಯೊಡ್ಡುತ್ತಾರೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ನನಗೆ ಖುದ್ದಾಗಿ ಇಂತಹ ಅನುಭವವಾಯಿತು.