ಹಾಗೆ ನೋಡಿದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ ಆರಂಭವಾಗಿ ಬಹಳ ಕಾಲವಾಯಿತು. ಸಿಎಎ ವಿರುದ್ಧ ಕವಿತೆ ಓದಿದ್ದಕ್ಕೆ ಕವಿಯ ಮೇಲೆ ಕೇಸು ದಾಖಲಿಸಿದ್ದು, ಶೃಂಗೇರಿ ಸಾಹಿತ್ಯ ಸಮ್ಮೇಳನವನ್ನು ಬಲವಂತವಾಗಿ ನಿಲ್ಲಿಸಿದ್ದು, ಪಾಕಿಸ್ತಾನ ಪರ ಜೈಕಾರದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಜೈಲಿಗೆ ಹಾಕಿದ್ದು ಇವೆಲ್ಲ ನೆನಪಿವೆಯೇ? ಹೀಗೆ ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿಯ ರೋಗಲಕ್ಷಣ ಗೋಚರಿಸಿದಾಗ ಈ ನಾಡಿನ ಎಷ್ಟು ಮಂದಿ ಸಾಹಿತಿಗಳು, ಚಿಂತಕರು ಪ್ರತಿಭಟನೆಯ ಸೊಲ್ಲೆತ್ತಿದರು? ಆಗ ವಹಿಸಿದ ದಿವ್ಯ ಮೌನದ ಪರಿಣಾಮವನ್ನು ನಾವೀಗ ಅನುಭವಿಸುತ್ತಿದ್ದೇವೆ. ಅದಕ್ಕೆ ಹಂಪನಾ ಪ್ರಕರಣ ಅತ್ಯುತ್ತಮ ಉದಾಹರಣೆ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ.