ಕನ್ನಡ ಭಾಷೆಯನ್ನು ಉಳಿಸಿ– ಬೆಳೆಸುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಕುರಿತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಂಡ ನೂರಾರು ನಿರ್ಣಯಗಳಿಗೆ ಬೆಲೆ ಇಲ್ಲದಂತೆ ಆಗಿರುವುದು ಖಂಡನೀಯ. ಈ ನಿರ್ಣಯಗಳು ಆಯಾ ಸಮ್ಮೇಳನದ ವೇದಿಕೆಗಷ್ಟೇ ಸೀಮಿತವಾದಂತಿವೆ. ಈವರೆಗೂ ನಡೆದಿರುವ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಂಡ ನೂರಾರು ನಿರ್ಣಯಗಳ ಅನುಷ್ಠಾನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಒತ್ತಡ ಹಾಕಿ, ಅವುಗಳು ಕ್ರಿಯೆಗೆ ಇಳಿಯುವಂತೆ ಮಾಡಿದ್ದಿದ್ದರೆ, ರಾಜ್ಯದಲ್ಲಿರುವ ಸಾವಿರಾರು ಕನ್ನಡ ಶಾಲೆಗಳು ಮುಚ್ಚುವ, ಕನ್ನಡ ನಾಡಿನ ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡಿದರೆ ದಂಡ ವಿಧಿಸುವ, ಬ್ಯಾಂಕಿಂಗ್ ಹಾಗೂ ಇತರ ಉದ್ಯೋಗ ಕ್ಷೇತ್ರಗಳಲ್ಲಿ ಕನ್ನಡಿಗರನ್ನು ನಿರ್ಲಕ್ಷಿಸುವಂತಹ ವಿಪರ್ಯಾಸ ಸಂಭವಿಸುತ್ತಿರಲಿಲ್ಲ.