ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ನಿಂದನೆ, ಮಾನಹಾನಿಕರ ಹೇಳಿಕೆ, ಆಕ್ಷೇಪಾರ್ಹ ಕಮೆಂಟ್ ಪ್ರಕಟಿಸುವುದು, ಪ್ರಚುರಪಡಿಸುವುದನ್ನು ತಡೆಯಲು ಕೇರಳ ಸರ್ಕಾರವು ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು, ಇದು ವಾಕ್ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಎಂದು ವಿರೋಧ ವ್ಯಕ್ತವಾದದ್ದರಿಂದ ಬಳಿಕ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಈ ಬೆಳವಣಿಗೆಯು ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಾಮಾಜಿಕ ಜಾಲತಾಣಗಳು ವೇದಿಕೆಗಳಾಗಿವೆ. ಆದರೆ, ಹೆಚ್ಚಾಗಿ ಆರೋಗ್ಯಕರ ಚರ್ಚೆ ಸಾಧ್ಯವಾಗುವುದಿಲ್ಲ. ವಿಭಿನ್ನ ವಿಚಾರಗಳ ಬಗೆಗೆ ಆರಂಭವಾಗುವ ಚರ್ಚೆಗಳು ಕೊನೆಗೆ ಬೆದರಿಕೆ, ಅವಮಾನಕರ ಮತ್ತು ಟ್ರೋಲ್ ಎಂಬ ಆಧುನಿಕ ವ್ಯಾಧಿ ಮೂಲಕ ಕೊನೆಗೊಳ್ಳುತ್ತವೆ.
ರಾಜ್ಯದ ಮಹಿಳಾ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಪರಿಸರ ಕಾಳಜಿಯ ಸಲುವಾಗಿ ಪಟಾಕಿಯನ್ನು ಸಿಡಿಸದಿರುವಂತೆ ಇತ್ತೀಚೆಗೆ ಮಾಡಿದ ಮನವಿಯನ್ನು ಟ್ರೋಲ್ ಮಾಡುವ ಮನಃಸ್ಥಿತಿಯುಳ್ಳವರ ಮಧ್ಯೆ ನಾವಿದ್ದೇವೆ. ಅಭಿಪ್ರಾಯ ವನ್ನು ಒಪ್ಪದೇ ಇದ್ದಾಗ ಟೀಕಿಸಲು ಪ್ರತಿಯೊಬ್ಬರೂ ಸರ್ವ ಸ್ವತಂತ್ರರಾಗಿರುತ್ತಾರೆ. ಆದರೆ ಟೀಕೆಯು ವಾಸ್ತವದ ಜೊತೆಗೆ ಪುರಾವೆಗಳೊಂದಿಗೆ ಇರಬೇಕೇ ವಿನಾ ವೈಯಕ್ತಿಕ ಮಾನಹಾನಿ, ಮನಸ್ಸನ್ನು ಗಾಸಿಗೊಳಿಸುವಂತಹ ಕಮೆಂಟುಗಳ ಮೂಲಕ ಟ್ರೋಲ್ ಮಾಡುವ ರೀತಿಯಲ್ಲಿ ಅಲ್ಲ. ಇಂತಹದ್ದನ್ನು ನಿಯಂತ್ರಿಸಲು ರಚನಾತ್ಮಕವಾದ ಕಾನೂನಿನ ಅಗತ್ಯವಿದೆ.
-ಪ್ರವೀಣ ನಾಗಪ್ಪ ಯಲವಿಗಿ, ಹಾವೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.