‘ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ವಿಕೃತ ಭಾಷೆಯ ಪರಿಣಾಮದ ಬಗ್ಗೆ ಚಿಂತಿಸಬೇಕಿದೆ’ ಎಂಬ ಕಳಕಳಿಯಿಂದ ಕೃಷ್ಣ ಪ್ರಸಾದ್ ಅವರು ಬರೆದಿರುವ ಲೇಖನ (ಪ್ರ.ವಾ., ಮಾರ್ಚ್ 16) ಓದುತ್ತಿದ್ದಂತೆಯೇ, ಪರಿಣಾಮದ ಜತೆಗೆ ಕಾರಣಗಳನ್ನೂ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎನಿಸಿತು. ಕೆಲವು ವರ್ಷಗಳಿಂದ ಸಾರ್ವಜನಿಕ ರಂಗದಲ್ಲಿರುವ ರಾಜಕಾರಣಿಗಳಲ್ಲಿ ಮತ್ತು ಜಾತಿ, ಧರ್ಮ, ದೇವರ ಹೆಸರಿನಲ್ಲಿ ಕಟ್ಟಿಕೊಂಡಿರುವ ಸಾಮಾಜಿಕ ಒಕ್ಕೂಟದ ಪದಾಧಿಕಾರಿಗಳಲ್ಲಿ ಹಲವರು ಯಾವುದೇ ಬಗೆಯ ನಾಚಿಕೆ, ಮುಜುಗರ, ಹೆದರಿಕೆ ಮತ್ತು ಹಿಂಜರಿಕೆಯಿಲ್ಲದೆ ತಮ್ಮ ಎದುರಾಳಿಗಳನ್ನು ಗುಂಡಿಕ್ಕಿ ಕೊಲ್ಲುವ, ಕೈಕಾಲು ಮುರಿಯುವ ಬೆದರಿಕೆಯ ನುಡಿಗಳನ್ನು ಮತ್ತು ಎದುರಾಳಿಗಳ ವ್ಯಕ್ತಿತ್ವವನ್ನೇ ಅಲ್ಲಗಳೆಯುವ ಬೈಗುಳದ ಮಾತುಗಳನ್ನು ಆಡತೊಡಗಿದ್ದಾರೆ. ಇದಕ್ಕೆ ಕಾರಣವೇನೆಂದರೆ, ರಾಜಕೀಯವಾಗಿ ದೊರೆಯುವ ಅಧಿಕಾರ, ಸಂಪತ್ತು. ಇವನ್ನು ಪಡೆಯಲು ಬೇಕಾಗುವ ಬಲಗಳೆಂದರೆ ಜಾತಿಬಲ, ಹಣಬಲ ಮತ್ತು ತೋಳ್ಬಲ.