ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆ ಸಂದರ್ಭದಲ್ಲಿ, ಕ್ಷೇತ್ರ ವ್ಯಾಪ್ತಿಯ ತ್ರಿಪುರಾಂತ ಎಂಬ ಹಳ್ಳಿಯಲ್ಲಿ ಮತದಾರರಿಗೆ ಹಣ ಹಂಚಲು ಮುಂದಾದ ವ್ಯಕ್ತಿಯೊಬ್ಬ ರನ್ನು ಗ್ರಾಮಸ್ಥರು ಹಿಡಿದು ಥಳಿಸಿರುವುದು ವರದಿಯಾಗಿದೆ (ಪ್ರ.ವಾ., ಏ. 17). ಗ್ರಾಮಸ್ಥರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದು ತಪ್ಪಾದರೂ ‘ರಾಜಕೀಯ ಪಕ್ಷಗಳೇ ಮತದಾರರನ್ನು ಭ್ರಷ್ಟರನ್ನಾಗಿ ಮಾಡುತ್ತಿವೆ. ನಮ್ಮಲ್ಲಿ ಹಣ ಇಲ್ಲವೇ’ ಎಂದು ಅವರು ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿರುವುದನ್ನು ಪ್ರಜಾಪ್ರಭುತ್ವದ ಪ್ರೇಮಿಗಳು ಮೆಚ್ಚಲೇಬೇಕು. ಚುನಾವಣೆಯಲ್ಲಿ ಹಣ ಕೊಟ್ಟು ಮತ ಪಡೆಯುತ್ತೇವೆ ಎಂಬ ಹುಂಬ ರಾಜಕಾರಣಿಗಳಿಗೆ ಇಂದೊಂದು ತಕ್ಕ ಪಾಠ. ಜೊತೆಗೆ ಎಲ್ಲ ರಾಜಕೀಯ ಪಕ್ಷಗಳಿಗೂ ಇದೊಂದು ಸರಿಯಾದ ಪಾಠವಾಗಬೇಕು. ನೋಟಿನ ಮೂಲಕ ವೋಟು ಕೊಳ್ಳುವುದನ್ನು ವಿರೋಧಿಸಿದ ಈ ಗ್ರಾಮದ ಜನರನ್ನು ಚುನಾವಣಾ ಆಯೋಗ ಅಭಿನಂದಿಸಬೇಕು. ಇಂತಹ ಗ್ರಾಮಗಳ ಸಂಖ್ಯೆ ಹೆಚ್ಚಾದಾಗ ಮಾತ್ರ ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಯಾಗಲು ಸಾಧ್ಯ.