ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದ ಸರೋಜಿನಿ ಮಹಿಷಿ ವರದಿಯು ದಶಕಗಳಷ್ಟು ಹಳೆಯದಾಗಿದೆ. ಕಳೆದ 15 ವರ್ಷಗಳಲ್ಲಿ ರಾಜ್ಯದಲ್ಲಿ ಆಗಿರುವ ಔದ್ಯೋಗಿಕ ಬೆಳವಣಿಗೆಯನ್ನು ಗಮನದಲ್ಲಿ ಇರಿಸಿಕೊಂಡು, ಇಂದಿನ ದಿನಮಾನಕ್ಕೆ ತಕ್ಕಂತೆ ಈ ಶಿಫಾರಸುಗಳನ್ನು ಬದಲಾಯಿಸಬೇಕಾಗಿದೆ. ಇಷ್ಟರಲ್ಲಾಗಲೇ ಈ ಕೆಲಸ ಮಾಡಬೇಕಾಗಿದ್ದ ಸರ್ಕಾರ ಇನ್ನೂ ಚಿಂತನೆ ನಡೆಸುವಲ್ಲಿ, ಬೇಡಿಕೆ ಪರಿಶೀಲಿಸುವುದರಲ್ಲಿ ಮೀನಮೇಷ ಎಣಿಸುತ್ತಿದೆ.
ರಾಜ್ಯದಲ್ಲಿ ಸ್ಥಾಪಿಸಲಾಗುವ ಉದ್ಯಮಗಳಿಗೆ ತೆರಿಗೆ ವಿನಾಯಿತಿ, ರಿಯಾಯಿತಿ ದರದಲ್ಲಿ ವಿದ್ಯುತ್, ನೀರು, ಭೂಮಿ ಎಲ್ಲವನ್ನೂ ನೀಡುವಾಗ, ಖರ್ಚಾಗುವುದು ಇಲ್ಲಿನ ಜನರ ತೆರಿಗೆಯ ಹಣ. ಹಾಗಾಗಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವುದು ಸಹಜ ನ್ಯಾಯವಾಗಿ ಕಾಣುತ್ತದೆ.