ಹೆಚ್ಚಿನ ರೈತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗುತ್ತಾರೆ. ಆದರೆ ವಾಸ್ತವದಲ್ಲಿ ಮಾರುಕಟ್ಟೆಯಲ್ಲಿ ತನ್ನ ಕೃಷಿ ಉತ್ಪನ್ನಗಳ ಮೌಲ್ಯ ನಿರ್ಧರಿಸುವ ಸಕಲ ಅಧಿಕಾರ ರೈತನದ್ದೇ ಆಗಿರುತ್ತದೆ. ಜೊತೆಗೆ, ನಿರ್ಧರಿಸಲಾಗದ ಅಸಹಾಯಕತನ ಸಹಾ ಆತನದ್ದೇ. ರೈತನು ಬೇಡಿಕೆ- ಪೂರೈಕೆಗಳ ಸರಳ ತಿಳಿವಳಿಕೆ ಇಲ್ಲದವನೇನೂ ಅಲ್ಲ. ಶೀಘ್ರವಾಗಿ ಸಂಪತ್ತು ಪಡೆಯಬೇಕು, ಇಡೀ ರೈತ ಸಮುದಾಯಕ್ಕೆ ಸಿಗಬಹುದಾದ ಲಾಭದ ಸಿಂಹಪಾಲು ತನಗೇ ದಕ್ಕಬೇಕು, ಮಳೆಹಾನಿ, ಬರ, ಬೆಳೆಹಾನಿ ಎಂಬ ಕಾರಣದಿಂದ ಸರ್ಕಾರ ಆರ್ಥಿಕವಾಗಿ ಸದಾ ತನ್ನ ಬೆಂಗಾವಲಿಗೆ ನಿಲ್ಲಬೇಕೆಂಬ ಪರಾವಲಂಬಿ ಮನಃಸ್ಥಿತಿ, ತನ್ನ ಕುರಿತು ನಿಜ ಕಾಳಜಿ ಇಲ್ಲದವರ ಮೇಲೆ ನಾಯಕತ್ವಕ್ಕಾಗಿನ ಅವಲಂಬನೆ... ಹೀಗೆ ಹತ್ತಾರು ಕಾರಣಗಳು ರೈತನ ಇಂದಿನ ದುಃಸ್ಥಿತಿಯ ಹಿಂದೆ ಇವೆ.