ಬೆಂಗಳೂರಿನ ರಾಸಾಯನಿಕ ಕಾರ್ಖಾನೆಯೊಂದರ ಗೋದಾಮಿನಲ್ಲಿ ಇತ್ತೀಚೆಗೆ ಬೆಂಕಿ ಅವಘಡ ಸಂಭವಿಸಿ, ಗೋದಾಮು ಸೇರಿದಂತೆ ಅಕ್ಕಪಕ್ಕದ ಕಟ್ಟಡಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಜನವಸತಿ ಪ್ರದೇಶದಲ್ಲಿ ಯಾವುದೇ ರೀತಿಯ ಅನುಮತಿ ಇಲ್ಲದೆ ಅಕ್ರಮವಾಗಿ ಈ ಗೋದಾಮನ್ನು ನಡೆಸಿಕೊಂಡು ಬಂದಿರುವುದೇ ಇದಕ್ಕೆಲ್ಲ ಕಾರಣ. ಕಾರ್ಖಾನೆಯ ಮಾಲೀಕರ ಜೊತೆಗೆ ಬಿಬಿಎಂಪಿಯವರ ನಿರ್ಲಕ್ಷ್ಯವೂ ಇಲ್ಲಿ ಎದ್ದುಕಾಣುತ್ತದೆ. ಅನುಮತಿ ಇಲ್ಲದೆ ನಡೆಸಿಕೊಂಡು ಬರುತ್ತಿರುವ ಈ ಕಾರ್ಖಾನೆಯು ಬಿಬಿಎಂಪಿಯವರ ಕಣ್ಣಿಗೆ ಇದುವರೆವಿಗೂ ಕಾಣಿಸಲೇ ಇಲ್ಲವೆ? ಆಗಿರುವ ನಷ್ಟವನ್ನು ಕಾರ್ಖಾನೆಯ ಮಾಲೀಕರೇ ತುಂಬಿಕೊಡಬೇಕು.