‘ರಾಜ್ಯೋತ್ಸವ ಪ್ರಶಸ್ತಿಗೆ 60 ವರ್ಷದ ವಯೋಮಿತಿಯನ್ನು ನಿಗದಿಪಡಿಸಿರುವುದು ಸರಿಯಾದ ಕ್ರಮವಲ್ಲ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ‘ವಯಸ್ಸಿನ ಮಿತಿ ಹೇರಿ ಸರ್ಕಾರ ತಪ್ಪು ಮಾಡಿತ್ತು’ ಎಂತಲೂ ಹೇಳಿದ್ದಾರೆ. ಇದು, ಹಿಂದಿನ ಸರ್ಕಾರದ ತಪ್ಪಲ್ಲ. ವಾಸ್ತವ ಏನೆಂದರೆ, ರಾಜ್ಯೋತ್ಸವ ಪ್ರಶಸ್ತಿಗಳಿಗೆ ಸೂಕ್ತ ಮಾನದಂಡವನ್ನು ರೂಪಿಸಲೆಂದು 2016ರಲ್ಲಿ ಅಂದಿನ ಸರ್ಕಾರವೇ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಕ ಮಾಡಿತ್ತು. ನಾನೂ ಅದರ ಸದಸ್ಯನಾಗಿದ್ದೆ. ಅನೇಕ ಸರಣಿ ಸಭೆಗಳ ನಂತರ ನೀಡಲಾದ ಅಂತಿಮ ಶಿಫಾರಸಿನಲ್ಲಿ ವಯೋಮಿತಿಯ ಬಿಗಿಯಾದ ಕಟ್ಟುಪಾಡುಗಳೇನೂ ಇರಲಿಲ್ಲ. ಎಳೆವಯಸ್ಸಿನಲ್ಲೇ ವಿಶೇಷ ಪ್ರತಿಭೆ ಮತ್ತು ಅಪರಿಮಿತ ಸಾಧನೆಯನ್ನು ಪ್ರದರ್ಶಿಸಿದ ಅಪರೂಪದ ವ್ಯಕ್ತಿಗಳನ್ನು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಬಹುದೆಂದು ನಿರ್ಣಯಿಸಲಾಗಿತ್ತು. ಈ ವಿಷಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿಯವರಿಗೆ ಅಥವಾ ಪ್ರಶಸ್ತಿಗಳ ಆಯ್ಕೆ ಸಮಿತಿಗೆ ಸರಿಯಾದ ತಿಳಿವಳಿಕೆ ನೀಡಿಲ್ಲವೆಂದು ಕಾಣುತ್ತದೆ.