ತೆರೆಮರೆಯ ಪಕ್ಷ ರಾಜಕಾರಣ
ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷರಹಿತವಾಗಿದ್ದರೂ ಆಚರಣೆಯಲ್ಲಿ ಅದರ ಪಾಲನೆಯಾಗಲಿಲ್ಲ. ಮತ ಎಣಿಕೆ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಲಿಲ್ಲ. ಜಯ ಗಳಿಸಿದ ಅಭ್ಯರ್ಥಿಗಳು ಚುನಾವಣಾ ಆಯೋಗದ ನಿರ್ದೇಶನವನ್ನು ಮೀರಿ ವಿಜಯೋತ್ಸವ ಆಚರಿಸಿದರು.
‘ನಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಿ ರುವುದು ಜನರ ವಿಶ್ವಾಸದ ದ್ಯೋತಕ’, ‘ಆಸೆ, ಆಮಿಷ, ಬೆದರಿಕೆಗಳ ಮೂಲಕ ನಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಸೆಳೆಯಲಾಗುತ್ತಿದೆ’, ‘ರಾಷ್ಚ್ರೀಯ ಪಕ್ಷಗಳ ಹಣ, ಅಧಿಕಾರದ ಹೊರತಾಗಿಯೂ ಗಮನಾರ್ಹ ಸಾಧನೆ ಮಾಡಿದ್ದೇವೆ’ ಎಂದೆಲ್ಲ ಪ್ರಮುಖ ಪಕ್ಷಗಳ ನಾಯಕರು ಹೇಳಿಕೆ ನೀಡಿದರು. ಈ ರೀತಿಯ ತೆರೆಮರೆಯ ಪಕ್ಷ ರಾಜಕಾರಣಕ್ಕಿಂತ, ನೇರವಾಗಿ ಪಕ್ಷಗಳ ಚಿಹ್ನೆಯಡಿಯಲ್ಲೇ ಚುನಾವಣೆ ನಡೆಸಬಹುದಿತ್ತಲ್ಲ!
ತನ್ನ ನಿರ್ದೇಶನಗಳು ಲಂಗುಲಗಾಮಿಲ್ಲದೆ ಉಲ್ಲಂಘನೆ ಯಾಗಿದ್ದರೂ ಆಯೋಗ ಮೂಕಪ್ರೇಕ್ಷಕನಂತಿತ್ತು. ಚುನಾವಣಾ ಫಲಿತಾಂಶವನ್ನು ಪಕ್ಷವಾರು ಪ್ರಸಾರ ಮಾಡದಂತೆ ಸುದ್ದಿಮಾಧ್ಯಮಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ವಾರ್ತಾ ಇಲಾಖೆಯ ಆಯುಕ್ತರನ್ನು ಆಯೋಗ ಕೋರಿಕೊಂಡಿದೆ. ಅವಧಿಗೆ ಸರಿಯಾಗಿ ನಿಷ್ಪಕ್ಷಪಾತ, ಪಾರದರ್ಶಕ ಚುನಾವಣೆಯ ಹೊಣೆ ಹೊತ್ತ ಶಾಸನಬದ್ಧ ಸಂಸ್ಥೆಯೊಂದರ ಹೊಣೆ ಅಷ್ಟಕ್ಕೇ ಮುಗಿಯುತ್ತದೆಯೇ?
-ತಿಪ್ಪೂರು ಪುಟ್ಟೇಗೌಡ, ಬೆಂಗಳೂರು
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.